ಉಡುಪಿ : ಬ್ಯಾಂಕಿನಲ್ಲಿ ಬೇನಾಮಿ ರೈತರ ಹೆಸರಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆದು ವಂಚಿಸಿದ ಆರೋಪದ ಹಿನ್ನೆಲೆಯಲ್ಲೀಗ ಕಿಶನ್ ಹೆಗ್ಡೆ ಕೊಳ್ಕೆಬೈಲು ಹಾಗೂ ಉಡುಪಿಯ ಭೂ ಅಭಿವೃದ್ಧಿ ಬ್ಯಾಂಕಿನ ಮಾಜಿ ವ್ಯವಸ್ಥಾಪಕಿ ಉಷಾ ಸುವರ್ಣ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಉಡುಪಿಯ ಭೂ ಅಭಿವೃದ್ಧಿ ಬ್ಯಾಂಕಿನಲ್ಲಿ ಆರೋಪಿಗಳಿಬ್ಬರು ನಬಾರ್ಡ್ ಯೋಜನೆಯಡಿ ರೈತರಿಗೆ ಸಿಗುವ ಸವಲತ್ತುಗಳನ್ನು ಸ್ವಂತಕ್ಕೆ ಉಪಯೋಗಿಸಿ ಸರಕಾರದ ಬಡ್ಡಿ ಸಹಾಯಧನವನ್ನು ಒಂದನೇ ಆರೋಪಿ ಕಿಶನ್ ಹೆಗ್ಡೆ (4.32ಲಕ್ಷ ರೂ.) ಮತ್ತು 2ನೇ ಆರೋಪಿ ಉಷಾ ಸುವರ್ಣ(3.85ಲಕ್ಷ ರೂ.) ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಆರೋಪಿಗಳು ಅವರ ಸ್ವತ: ಮತ್ತು ಹತ್ತಿರದ ಸಂಬಂಧಿಗಳ ಹೆಸರಿನಲ್ಲಿ ಬೇನಾಮಿ ಸಾಲಗಳನ್ನು ಪಡೆದು ಕೃಷಿಯೇತರ ಭೂಮಿಗೂ ಕೃಷಿ ಸಾಲ ನೀಡಿ ವಂಚಿಸಿದ್ದಾರೆ.
ಬ್ಯಾಂಕ್ನ ಸದಸ್ಯರಲ್ಲದವರಿಗೂ ಸಾಲ ನೀಡಿ ರೈತಾಪಿ ಜನರಿಗೆ ಸಿಗಬೇಕಾದ ಸವಲತ್ತುಗಳನ್ನು ತಾವೇ ದುರುಪಯೋಗ ಪಡಿಸಿಕೊಂಡಿದ್ದಾರೆ. ಬ್ಯಾಂಕ್ನ ನಿಯಮಗಳನ್ನು ಮೀರಿ ಯಾವುದೇ ದಾಖಲೆಗಳನ್ನು ಅಡಮಾನವಾಗಿರಿಸದೆ, ಜಾಮೀನುದಾರರ ಸಹಿ ಪಡೆಯದೆ ಲಕ್ಷಾಂತರ ಮೊತ್ತದ ಸಾಲವನ್ನು ಆರೋಪಿಗಳೇ ಪಡೆದು ಬ್ಯಾಂಕಿಗೆ ಮೋಸ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.