



ಉಡುಪಿ: ಉಡುಪಿ ಸಾಬರಕಟ್ಟೆಯಲ್ಲಿರುವ ಶಿರಿಯಾರ ಸೇವಾ ಸಹಕಾರಿ ಸಂಘದ ಕಾವಡಿ ಶಾಖೆಯಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಾವಡಿ ಗ್ರಾಮದ ಹವರಾಲು ನಿವಾಸಿ ಹರೀಶ್ ಕುಲಾಲ್ (32) ಎಂದು ಗುರುತಿಸಲಾಗಿದೆ.
ಸಂಘದ ಕಾವಡಿ ಶಾಖೆಯ ಪ್ರಭಾರ ಮ್ಯಾನೇಜರ್, ಹೆಗ್ಗುಂಜೆ ಗ್ರಾಮದ ಜಾನುವಾರಕಟ್ಟೆ ನಿವಾಸಿ ಸುರೇಶ ಭಟ್ ಹಾಗೂ ಶಾಖೆಯ ಕಿರಿಯ ಗುಮಾಸ್ತ ಹರೀಶ್ ಕುಲಾಲ್ ಸಂಘಕ್ಕೆ 1.70 ಕೋಟಿ ರೂ.ಪಾಯಿ ಹಣ ವಂಚಿಸಿ ತಲೆಮರೆಸಿಕೊಂಡಿದ್ದರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ನವೆಂಬರ್ 18ರಂದು ಸುರೇಶ್ ಭಟ್ನ್ನು ಬಂಧಿಸಿದ್ದರು. ಇದೀಗ ತಲೆಮರೆಸಿಕೊಂಡಿದ್ದ ಹರೀಶ್ ಕುಲಾಲ್ನನ್ನು ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ. ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಮಾರ್ಗದರ್ಶನದಲ್ಲಿ ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಪ್ರವೀಣ್ ಕುಮಾರ್, ಎಸ್ಐ ಮಾಂತೇಶ್ ಜಾಭಗೌಡ, ಹಾಗೂ ಠಾಣಾ ಸಿಬ್ಬಂದಿ ಕೃಷ್ಣ ಶೇರೆಗಾರ, ಶ್ರೀಧರ್, ಶರತ್ ಅವರುಗಳ ತಂಡ ಬಂಧಿಸಿದೆ.








