ಉಡುಪಿ: ಟ್ರಕ್ ಢಿಕ್ಕಿ ಹೊಡೆದು ಮೆದುಳು ನಿಷ್ಕ್ರಿಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಮೃತಪಟ್ಟಿದ್ದು, ಅಂಗಾಂಗಳನ್ನು ದಾನ ಮಾಡುವ ಮೂಲಕ ಅವರ ಮನೆಯವರು ಮಾನವೀಯತೆ ಮೆರೆದಿದ್ದಾರೆ. ಉದ್ಯಾವರ ಬೋಳಾರ ಗುಡ್ಡೆ ಅಂಕುದ್ರು ನಿವಾಸಿ ಪ್ರಶಾಂತ್(37) ಮೃತ ಯುವಕ ಎಂದು ತಿಳಿದು ಬಂದಿದೆ.
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಕನ್ನಿ ಪಾರ್ಟಿ ಕೆಲಸ ನಿರ್ವಹಿಸುತ್ತಿದ್ದ ಪ್ರಶಾಂತ್ ಕೆಲಸ ಮುಗಿಸಿ ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಹಲೀಮಾ ಸಾಬು ಸಭಾಭವನದ ಬಳಿ ರಸ್ತೆ ದಾಟುತ್ತಿದ್ದ ವೇಳೆ ಟ್ರಕ್ ಢಿಕ್ಕಿ ಹೊಡೆದು ರಸ್ತೆ ಬದಿ ಬಿದ್ದಿದ್ದರು ಎನ್ನಲಾಗಿದೆ. ತೀವ್ರ ಗಾಯಗೊಂಡಿದ್ದ ಅವರನ್ನು ಮಿತ್ರರಾದ ಪ್ರವೀಣ್ ಮತ್ತು ಅಭಿಷೇಕ್ ಅವರು ಸ್ಥಳೀಯರ ಸಹಾಯದಿಂದ ಉಡುಪಿ ಖಾಸಗಿ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರ ಸೂಚನೆಯಂತೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿದ್ದರು.
ತಲೆಗೆ ತೀವ್ರ ಪೆಟ್ಟಾಗಿದ್ದ ಅವರ ಮೆದುಳು ನಿಷ್ಕ್ರಿಯಗೊಂಡಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟರು ಎನ್ನಲಾಗಿದೆ.
ಅವಿವಾಹಿತರಾಗಿದ್ದ ಪ್ರಶಾಂತ್ ಅವರು ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ. ಅಂಕುದ್ರುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಅವರ ಕುಟುಂಬಕ್ಕೆ ಪ್ರಶಾಂತ್ ಅವರ ಸಂಪಾದನೆಯೇ ಆದಾಯದ ಮೂಲವಾಗಿತ್ತು. ಅಪಘಾತಕ್ಕೆ ಕಾರಣನಾದ ಟ್ರಕ್ ಚಾಲಕ ಬಿ. ಜಗನ್ನಾಥ ಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಕಾವು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರಿಸಿದ್ದಾರೆ. ಮೃತ ಯುವಕನ ಕಿಡ್ನಿ ಮತ್ತು ಲಿವರ್ ಅನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯರ ಮೂಲಕ ಸುರಕ್ಷಿತವಾಗಿ ತೆಗೆದು ಮಂಗಳೂರು ಮತ್ತು ಬೆಂಗಳೂರಿಗೆ ಸಾಗಿಸಲಾಗಿದೆ.