ಉಳ್ಳಾಲ: ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ದಾಖಲಾದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತ್ತೆಗಾಗಿ ಆದೇಶ ಹೊರಡಿಸಲಾಗಿತ್ತು. ಈ ಹಿನ್ನಲೆಯಲ್ಲಿ 4 ಮಂದಿ ಆರೋಪಿಗಳನ್ನು ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಸರಗೋಡು, ಕೊಡಗು, ಮುಡಿಪು ಮೂಲದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಕಾಸರಗೋಡಿನ ಮೊಹಮ್ಮದ್ ಫಾರೂಕ್ (24), ಕೊಡಗು ಕುಶಾಲನಗರದ ಸೈಯ್ಯದ್ ಮೊಹಮ್ಮದ್ (31), ಮುಡಿಪು ಮೊಹಮ್ಮದ್ ಅನ್ಸಾರ್ (23), ಮಂಜೇಶ್ವರದ ಮೊೈದೀನ್ ನವಾಜ್ (34) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಒಂದು ಗೋಣಿ ಚೀಲ ಮತ್ತು ಪ್ಲಾಸ್ಟಿಕ್ ಗೋಣಿ ಚೀಲದ ಕಟ್ಟುಗಳು ಮತ್ತು 5 ಪ್ಯಾಕ್ಗಳು, ಹಾಗೂ ಸುಮಾರು 200 ಕೆಜಿ ತೂಕದಷ್ಟು ಇರುವ ಗಾಂಜಾ ತುಂಬಿದ ಪ್ಯಾಕ್ಗಳನ್ನು ಹಾಗೂ ಆರೋಪಿಗಳ ವಶದಲ್ಲಿದ್ದ 3 ತಲವಾರು, 1 ಚಾಕು, 4 ಮೊಬೈಲ್, 1 ವೈ ಫೈ ಸೆಟ್ ಗಳನ್ನು ಸ್ವಾಧೀನಪಡಿಸಲಾಗಿದೆ.
ಈ ಕಾರ್ಯಚರಣೆ ಮೂಡಬಿದ್ರೆ ಪೊಲೀಸ್ ಠಾಣಾ ಪಿ.ಎಸ್.ಐ ಸುದೀಮ್ ಮತ್ತು ಸಿಬ್ಬಂದಿಗಳು ಹಾಗೂ ದಕ್ಷಿಣ ಉಪ ವಿಭಾಗ ಸ್ಕ್ವಾಡ್ ಸಿಬ್ಬಂದಿಗಳ ಸಹಾಯದಿಂದ ನಡೆದಿದೆ.
ಆರೋಪಿಗಳು ಮೀನು ಸಾಗಾಟದ ಕಂಟೇನರ್ ಲಾರಿ ಹಾಗೂ ಐಷಾರಾಮಿ ಕಾರಿನಲ್ಲಿ ಆಂಧ್ರ ಪ್ರದೇಶದಿಂದ ಕೇರಳದ ಕಾಸರಗೋಡಿಗೆ ಗಾಂಜಾ ಸಾಗಾಟ ಮಾಡುತ್ತಿದ್ದರು. ಆರೋಪಿಗಳು ಮಂಗಳೂರು ಸೇರಿದಂತೆ ಕೊಡಗು, ಹಾಸನ ಹಾಗೂ ಕಾಸರಗೋಡಿಗೆ ಗಾಂಜಾ ಪೂರೈಸುತ್ತಿದ್ದರು ಎನ್ನಲಾಗಿದೆ.
ಮಹತ್ವದ ಕಾರ್ಯಾಚರಣೆ ನಡೆಸಿ ಬೃಹತ್ ಗಾಂಜಾ ಸಾಗಾಟ ಜಾಲ ಭೇದಿಸಿದ ಪೊಲೀಸ್ ತಂಡಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು 25 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.