


ಉಳ್ಳಾಲ: ಆಟೋ ಚಾಲಕರೋರ್ವರು ನಾಪತ್ತೆಯಾಗಿರುವ ಬಗ್ಗೆ ಅವರ ಪತ್ನಿ ನೀಡಿದ ದೂರಿನ ಮೇರೆಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಅಬ್ದುಲ್ ಸಮಾದ್ (52) ನಾಪತ್ತೆಯಾದ ವ್ಯಕ್ತಿ.
ಅಬ್ದುಲ್ ಸಮಾದ್ ಅವರ ಪತ್ನಿ ಆಯಿಷಾ ಅವರು ಫೆ.4 ರಂದು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಮೇರೆಗೆ ಮೊ.ನಂ: 11/2026 ಕಲಂ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ.
ಮಂಜನಾಡಿ ಗ್ರಾಮದ ಪೊಟ್ಟಳಿಕೆ ಸಾರ್ತಬೈಲ್ ಕೋಡಿ ನಿವಾಸಿ ಆಟೋ ಚಾಲಕ ಅಬ್ದುಲ್ ಸಮಾದ್ ಅವರು ಫೆ. 2ರಂದು ಮಧ್ಯಾಹ್ನ 12:30 ಗಂಟೆಗೆ ಬಾಡಿಗೆಗೆಂದು ತೆರಳಿರುತ್ತಾರೆ. ಫೆ. 2ರಂದು ಸಂಜೆ 6:00 ಗಂಟೆಗೆ ಮನೆಯಲ್ಲಿ ಬರಾಕತ್ ಹಬ್ಬ ಇದ್ದು ಹಿಂದಿರುಗಿ ಬಂದಿರದ ಹಿನ್ನೆಲೆ ಸಂಜೆ 6:30 ಗಂಟೆಗೆ ಪತ್ನಿ ಅಬ್ದುಲ್ ಸಮದ್ ಅವರಿಗೆ ಮನೆಗೆ ಬರುವಂತೆ ಫೋನ್ ಮಾಡಿ ತಿಳಿಸಿದಾಗ 5 ನಿಮಿಷದಲ್ಲಿ ಮನೆಗೆ ಬರುವುದಾಗಿ ತಿಳಿಸಿದ್ದಾರೆ. ಆದರೆ ಅಬ್ದುಲ್ ಸಮದ್ ಅವರು ಬಾರದೇ ಇದ್ದುದರಿಂದ ಅವರ ಪತ್ನಿ ಪುನಃ ಸಂಜೆ 7:15 ಗಂಟೆಗೆ ಫೋನ್ ಮಾಡಿದ್ದು, ಈ ವೇಳೆ ಅಬ್ದುಲ್ ಸಮದ್ ಅವರ ಮೊಬೈಲ್ ಸ್ವೀಚ್ ಆಫ್ ಆಗಿರುತ್ತದೆ. ನಂತರ ಪತ್ನಿ ಅಬ್ದುಲ್ ಸಮದ್ ಅವರನ್ನು ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗದ ಕಾರಣ ಅವರ ಪತ್ನಿ ದೂರು ನೀಡಿದ್ದಾರೆ.
ಅಬ್ದುಲ್ ಸಮದ್ ಅವರು 5.6 ಅಡಿ ಎತ್ತರವಿದ್ದು, ಕಪ್ಪು ಮೈ ಬಣ್ಣ, ಕ್ಲೀನ್ ಶೇವ್, ತೋರ ಶರೀರ, ಕೋಲು ಮುಖ ಹೊಂದಿರುತ್ತಾರೆ. ನಾಪತ್ತೆಯಾದ ವೇಳೆ ಲೈಟ್ ಗ್ರೀನ್ ಟೀ ಶರ್ಟ್ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಬ್ಯಾರಿ, ಮಲಯಾಳಂ, ತುಳು, ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಯನ್ನು ತಿಳಿದವರಾಗಿದ್ದಾರೆ.
ಇವರ ಸುಳಿವು ದೊರೆತಲ್ಲಿ ಪೊಲೀಸ್ ಆಯುಕ್ತರ ಕಛೇರಿ ಮಂಗಳೂರು ನಗರ ನಿಯಂತ್ರಣ ಕೊಠಡಿಗೆ ದೂರವಾಣಿ ಸಂಖ್ಯೆ 0824-2220800 ಅಥವಾ ಕೊಣಾಜೆ ಪೊಲೀಸ್ ಠಾಣೆಯ 0824-2220536, 9480802350 ನೇ ಸಂಖ್ಯೆಗೆ ಮಾಹಿತಿ ನೀಡಬೇಕಾಗಿ ಕೋರಲಾಗಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.








