ಉಳ್ಳಾಲ: ಅಬಕಾರಿ ಇಲಾಖೆಯ ಅಧಿಕಾರಿಗಳು ಅಕ್ರಮ ಸಾರಾಯಿ ಘಟಕಕ್ಕೆ ದಾಳಿ ಮಾಡಿ 2240 ಲೀಟರ್ ಸ್ಪಿರಿಟ್ ಮತ್ತು 222 ಲೀಟರ್ ನಕಲಿ ಲಿಕ್ಕರ್ ವಶಪಡಿಸಿಕೊಂಡ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಕಿನ್ಯಾ ಗ್ರಾಮದ ಸಾಂತ್ಯಗುತ್ತು ಬಳಿ ನಡೆದಿದೆ.
ಸಾಂತ್ಯಗುತ್ತು ನಿವಾಸಿ ನಿತ್ಯಾನಂದ ಭಂಡಾರಿ ಎಂಬಾತನ ಮನೆಗೆ ದಾಳಿ ನಡೆದಿದೆ.
ಕಿನ್ಯಾದಲ್ಲಿ ಸ್ಪಿರಿಟ್ ಮಾರಾಟ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಅಪಾರ ಪ್ರಮಾಣದ ಮದ್ಯ ವಶಪಡಿಸಿಕೊಂಡಿದ್ದಾರೆ. ಕೇರಳಕ್ಕೆ ಸಾಗಿಸಲು ಆರೋಪಿ ಈ ದಂಧೆ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ.
ದಾಳಿಯ ಸಂದರ್ಭ ಆರೋಪಿ ಪರಾರಿಯಾಗಿದ್ದಾನೆ ಎಂದು ಅಬಕಾರಿ ಪೊಲೀಸರು ತಿಳಿಸಿದ್ದಾರೆ. ಮಂಗಳೂರು ದಕ್ಷಿಣ ವಲಯ-2 ಇದರ ಅಬಕಾರಿ ನಿರೀಕ್ಷಕ ಕಮಲಾ ಎಚ್.ಎನ್. ಮತ್ತು ಉಪಾಧೀಕ್ಷಕ ಸೈಯ್ಯದ್ ತಫ್ಝೀಲುಲ್ಲಾ ಅವರ ಮಾರ್ಗದಶನದಲ್ಲಿ ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ನಾಗರಾಜಪ್ಪ ಟಿ. ಹಾಗೂ ಉಪ ಅಯುಕ್ತ ಟಿ.ಎಂ ಶ್ರೀನಿವಾಸ್ ನಿರ್ದೇಶನದಲ್ಲಿ ನಡೆದ ದಾಳಿಯಲ್ಲಿ ಸುಮಾರು 25 ಕ್ಕೂ ಅಧಿಕ ಅಬಕಾರಿ ಅಧಿಕಾರಿಗಳು ಭಾಗವಹಿಸಿದ್ದರು.