ಉಪ್ಪಿನಂಗಡಿ: ಮೊಬೈಲ್ ಸ್ಟೇಟಸ್ ವಿಚಾರವಾಗಿ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿ ಎಂಬಲ್ಲಿ ಯುವಕರ ತಂಡವೊಂದು ಮನೆ ಗೇಟ್ ಬಳಿ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನೆಕ್ಕಿಲಾಡಿ ನಿವಾಸಿ ಮುಕುಂದ ಎಂಬವರ ಮನೆ ಮುಂದೆ ಕಾರಿನಲ್ಲಿ ಬಂದ ಉಬೈದ್ ಮತ್ತು 7 ಮಂದಿಯ ತಂಡ ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಉಪ್ಪಿನಂಗಡಿ ಠಾಣೆಯಲ್ಲಿ ಮಾ. 3 ರಂದು ಪ್ರಕರಣ ದಾಖಲಾಗಿತ್ತು.ಮಾ.2 ರ ತಡರಾತ್ರಿ ಪ್ರಕರಣ ನಡೆದಿದ್ದು ಮುಕುಂದ್ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ :143,147,447,504, 506,323,427,ಜೊತೆಗೆ 149 ಭಾ.ದಂ.ಸಂ ಮತ್ತು ದಲಿತ ದೌರ್ಜನ್ಯ ಕಾಯಿದೆ ಕಲಂ: 3(2) (V) (a) SC/ST P A ACT 2015 ರಂತೆ ಪ್ರಕರಣ ದಾಖಲಾಗಿತ್ತು.
ಇದೀಗ ಉಪ್ಪಿನಂಗಡಿ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಆಪೆ ವಾಹನವನ್ನು ಸಹ ವಶಪಡಿಸಿಕೊಂಡಿದ್ದಾರೆ ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.ರಾಮಮಂದಿರದ ಬಗ್ಗೆ ಸ್ಟೇಟಸ್ ಹಾಕಿರುವುದನ್ನು ಆಕ್ಷೇಪಿಸಿ ಆಪೆ ರಿಕ್ಷಾದಲ್ಲಿ ಬಂದ ಉಬೈದ್ ಮತ್ತು 7 ಮಂದಿಯ ತಂಡ ಅವಾಚ್ಯ ಶಬ್ಧಗಳಿಂದ ನಿಂದಿಸಿ ಮನೆಯ ಗೇಟ್ ತೆಗೆದು ಮನೆಯೊಳಗೆ ನುಗ್ಗಿ ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಒಡ್ಡಿರುವುದಾಗಿ ಮುಕುಂದ್ ಉಪ್ಪಿನಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆಪಾದಿಸಿದ್ದರು.
ಅಲ್ಲದೇ ಮುಕುಂದ್ ಅವರ ಮನೆ ಮುಂದೆ ಗೇಟ್ ಬಳಿ ಯುವಕರ ತಂಡವೊಂದು ಅವಾಚ್ಯವಾಗಿ ಮನೆಯವರನ್ನು ನಿಂದಿಸುತ್ತಿರುವ ವಿಡೀಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಘಟನೆಯ ಬಗ್ಗೆ ಹಿಂದೂ ಪರ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಪುತ್ತೂರು ಶಾಸಕ ಸಂಜೀವ ಮಠಂದೂರು ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದರು . ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಆರೋಪಿ ಗಳನ್ನು ಬಂಧಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಿದ್ದರು.