ಉತ್ತರ ಪ್ರದೇಶ: ಎರಡು ವಾರಗಳ ಹಿಂದೆ ಉತ್ತರ ಪ್ರದೇಶದ ಹಾಥ್ರಸ್ ಜಿಲ್ಲೆಯಲ್ಲಿ ನಾಲ್ವರು ದುಷ್ಕರ್ಮಿಗಳಿಂದ ಗ್ಯಾಂಗ್ ರೇಪ್ ಆಗಿದ್ದ 19 ವರ್ಷದ ದಲಿತ ಯುವತಿ ಇಂದು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಹಲವು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ್ದ ಈ ಯುವತಿ ಇಂದು ಬೆಳಗ್ಗೆ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು. ಜವಾಹರಲಾಲ್ ನೆಹರೂ ಮೆಡಿಕಲ್ ಆಸ್ಪತ್ರೆಯಿಂದ ನಿನ್ನೆಯಷ್ಟೇ ಈಕೆಯನ್ನು ಏಮ್ಸ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ, ಇಲ್ಲೂ ಆಕೆಯ ಆರೋಗ್ಯ ಸುಧಾರಣೆ ಕಾಣಲಿಲ್ಲ.
ಹಾಥ್ರಸ್ ಜಿಲ್ಲೆ ಈ ಯುವತಿ ಸೆಪ್ಟೆಂಬರ್ 14ರಂದು ತನ್ನ ತಾಯಿ ಜೊತೆ ಹೊಲಕ್ಕೆ ಹೋಗಿದ್ದಳು. ಆದರೆ, ದಿಢೀರನೇ ನಾಪತ್ತೆಯಾಗಿದ್ದಳು. ಹುಡುಕಾಡಿದಾಗ ಈಕೆ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ನಾಲ್ವರು ದುರುಳರು ಈಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು. ಸರಿಯಾಗಿ ಸಹಕರಿಸಲಿಲ್ಲವೆಂದು ಈಕೆಯನ್ನು ಕತ್ತು ಹಿಸುಕಿ ಕೊಲ್ಲಲೂ ಯತ್ನಿಸಿದ್ದರು. ಈ ನರಳಾಟದಲ್ಲಿ ಆಕೆ ತನ್ನ ನಾಲಗೆಯನ್ನೇ ಹಲ್ಲಿನಿಂದ ಕಚ್ಚಿಕೊಂಡು ಗಂಭೀರ ಗಾಯ ಮಾಡಿಕೊಂಡಿದ್ದಳು.
ನಂತರ ಈಕೆಯನ್ನು ಜವಾಹರಲಾಲ್ ನೆಹರೂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಈಕೆಯ ಎರಡೂ ಕಾಲುಗಳು ನಿಷ್ಕ್ರಿಯಗೊಂಡಿದ್ದವು. ಈಕೆಯ ಕೈಗಳೂ ಸ್ವಲ್ಪಮಟ್ಟಿಗೆ ಸ್ವಾಧೀನ ಕಳೆದುಕೊಂಡಿದ್ದವು. ಈಕೆಯನ್ನು ವೆಂಟಿಲೇಟರ್ನಲ್ಲಿಟ್ಟು ಬದುಕಿಸುವ ಪ್ರಯತ್ನಗಳು ನಡೆದಿದ್ದವು. ಆದರೆ ಅಲ್ಲಿ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ನಿನ್ನೆ ಸೋಮವಾರ ದೆಹಲಿಯ ಏಮ್ಸ್ ಆಸ್ಪತ್ರೆಗೆ ಕರೆದುತರಲಾಗಿತ್ತು. ಆದರೆ, ಇಲ್ಲಿಯೂ ಆರೋಗ್ಯ ಸುಧಾರಣೆ ಕಾಣದೆ ಇಂದು ಇಹಲೋಕ ತ್ಯಜಿಸಿದ್ದಾಳೆ.