ಉಳ್ಳಾಲ: ರಾಜ್ಯದ ಹಲವೆಡೆ ಸಾವರ್ಕರ್ ಪರವಾಗಿ ಪ್ಲೆಕ್ಸ್ ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ. ಕೋಮು ಸೂಕ್ಷ್ಮ ಪ್ರದೇಶ ಉಳ್ಳಾಲದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಲ್ಲಿ ಗುರುತಿಸಿಕೊಂಡಿರುವ ಮುಖಂಡ ಎ.ಆರ್. ಫಝಲ್ ಅಸೈಗೋಳಿ ಬಹಿರಂಗವಾಗಿಯೇ ಸಾವರ್ಕರ್ ಪರವಾಗಿ ಪ್ಲೆಕ್ಸ್ ಹಾಕಿದ್ದಾರೆ. ದೇರಳಕಟ್ಟೆ ಮತ್ತು ಅಸೈಗೋಳಿಯಲ್ಲಿ ಬೃಹತ್ ಪೋಸ್ಟರ್ ಹಾಕಿದ್ದು, ಸಾವರ್ಕರ್ ಅವರಿಗೆ ನಮನಗಳು ಎಂದು ಬರೆದಿದ್ದಾರೆ. ಗುರುವಾರ ಸಂಜೆ ಹೊತ್ತಿಗೆ ಎರಡೂ ಕಡೆ ಪ್ಲೆಕ್ಸ್ ಕಂಡುಬಂದಿದ್ದು ಕೆಲವರಿಂದ ವಿರೋಧವೂ ವ್ಯಕ್ತವಾಗಿತ್ತು.
ಈ ರೀತಿ ಪ್ಲೆಕ್ಸ್ ಹಾಕಿದ ಬೆನ್ನಲ್ಲೇ ಕೋಣಾಜೆ ಪೊಲೀಸರು ದೇರಳಕಟ್ಟೆಯಲ್ಲಿ ಹಾಕಿದ್ದ ಫೆಕ್ಸನ್ನು ತೆರವು ಮಾಡಿದ್ದಾರೆ. ಘರ್ಷಣೆಗೆ ಅವಕಾಶ ಮಾಡಿಕೊಡುವುದು ಬೇಡವೆಂದು ಪೊಲೀಸರೇ ತೆರವು ಕಾರ್ಯ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಪೊಲೀಸರೇ ಪ್ಲೆಕ್ಸ್ ತೆರವು ಮಾಡಿರುವುದು ಬಿಜೆಪಿ ಮುಖಂಡರನ್ನು ಕೆರಳಿಸಿದೆ.
ನಾನು ಭಯೋತ್ಪಾದಕರ ಪರವಾಗಿ ಪ್ಲೆಕ್ಸ್ ಹಾಕಿಲ್ಲ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫಜಲ್, ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ವೀರ ಸಾವರ್ಕರ್ ಅವರಿಗೆ ನಮನ ಸಲ್ಲಿಸುವುದರಲ್ಲಿ ತಪ್ಪೇನಿದೆ. ನಾನು ಭಯೋತ್ಪಾದಕರ ಪರವಾಗಿ ಪ್ಲೆಕ್ಸ್ ಹಾಕಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಒಂದು ದಿವಸ ಆಗಿರಲಿ, 50 ವರ್ಷ ಆಗಿರಲಿ, ಹೋರಾಟ ಮಾಡಿದವರೆಲ್ಲ ಪ್ರಾತಃ ಸ್ಮರಣೀಯರು. ಅಂತಹ ವ್ಯಕ್ತಿಗಳಿಗೆ ಅವಮಾನ ಮಾಡುವುದು ಸರಿಯಲ್ಲ. ಕೊಣಾಜೆ ಪೊಲೀಸರು SDPI ಕಾರ್ಯಕರ್ತರ ರೀತಿ ವರ್ತಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.