ಗ್ರಾಮ ಪಂಚಾಯತ್ನಿಂದ ಪಿಡಬ್ಲ್ಯೂ ಇಲಾಖೆಗೆ ಸೇರಿದ ಜಾಗದಲ್ಲಿ ಅತಿಕ್ರಮವಾಗಿ ಕಟ್ಟಡಗಳನ್ನು ನಿರ್ಮಾಣಮಾಡಿ ಅದನ್ನು ಕಾನೂನು ಬಾಹಿರವಾಗಿ ಏಲಂ ನಡೆಸುವುದರ ಮೂಲಕ ಕಾನೂನು ಉಲ್ಲಂಘನೆಯಾದ ಘಟನೆ ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆ ಸಾಮಾಜಿಕ ಹೋರಾಟಗಾರ ಧನಂಜಯ ಪಾದೆ ಹಾಗೂ ದೇವಿಪ್ರಸಾದ್ ಶೆಟ್ಟಿ ಎಂಬವರು ಈ ಬಗ್ಗೆ ಸಂಬಂಧಪಟ್ಟ ವಿವಿಧ ಇಲಾಖಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಅಂದಿನ ವೀರಕಂಭ ಗ್ರಾಮ ಪಂಚಾಯತ್ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ನಿಶಾಂತ್ ಮಂಗಲಪದವು ಪರಿಸರದಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಲು ಓರ್ವ ಗುತ್ತಿಗೆದಾರನನ್ನು ನೇಮಿಸಿರುತ್ತಾರೆ. ಗುತ್ತಿಗೆದಾರನ ಮೂಲಕ ಪಿಡಬ್ಲ್ಯೂ ಇಲಾಖೆಗೆ ಸೇರಿದ ಜಾಗದಲ್ಲಿ ಸರಿಸುಮಾರು ಏಳು ಅಂಗಡಿ ಮುಂಗಟ್ಟುಗಳನ್ನು ನಿರ್ಮಿಸಲಾಗಿದೆ. ಪಿಡಬ್ಲ್ಯೂ ಇಲಾಖೆಯಿಂದ ಈ ಬಗ್ಗೆ ಯಾವುದೇ ನಿರಪೇಕ್ಷಣಾ ಪತ್ರವನ್ನು ಪಡೆಯದೇ, ಕಾನೂನು ಬಾಹಿರವಾಗಿ ಕಟ್ಟಡಗಳ ನಿರ್ಮಾಣ ಕಾರ್ಯವನ್ನು ನಡೆಸಿದ್ದಾರೆ ಎಂಬುವುದಾಗಿ ಸಂಬಂಧಪಟ್ಟ ವಿವಿಧ ಇಲಾಖಾಧಿಕಾರಿಗಳಿಗೆ ನೀಡಿದ ದೂರಿನಲ್ಲಿ ನಮೂದಿಸಿರುತ್ತಾರೆ.
ಅದಲ್ಲದೆ ಅಂಗಡಿ ಕೋಣೆಗಳನ್ನು ಏಲಂ ಮಾಡುವುದರ ಮೂಲಕ ಅದರಲ್ಲಿ ಬಂದ ಹಣವನ್ನು ಗುತ್ತಿಗೆದಾರನಿಗೆ ನೀಡಿರುವುದು ಅಕ್ಷಮ್ಯ ಅಪರಾಧ ಎಂದು ದೂರುದಾರರು ತಿಳಿಸಿದ್ದಾರೆ. ಅದಲ್ಲದೆ ಅಂಗಡಿ ಕೋಣೆಗಳನ್ನು ಏಲಂನಲ್ಲಿ ಖರೀದಿಸಿದ ವ್ಯಾಪಾರಸ್ಥರಿಗೆ ವ್ಯಾಪಾರ ಪರವಾನಿಗೆ ನೀಡಿದಲ್ಲದೆ, ಮೆಸ್ಕಾಂ ಇಲಾಖೆ ವಿದ್ಯುತ್ ಸಂಪರ್ಕ ನೀಡಿರುವುದು ಸಾರ್ವಜನಿಕ ವಲಯಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಆದಷ್ಟು ಬೇಗನೆ ಗಮನಹರಿಸಿ, ಸೂಕ್ತ ಪರಿಹಾರ ಕ್ರಮ ಕೈಗೊಂಡು ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸುವಂತೆ ಮನವಿ ಸಲ್ಲಿಸಿದ್ದಾರೆ.