
ನವದೆಹಲಿ: ಆತ್ಮನಿರ್ಭರ ಭಾರತದ ಕನಸನ್ನು ದೇಶದ ಜನರಲ್ಲಿ ಬಿತ್ತಿರುವ ಪ್ರಧಾನಿ ನರೇಂದ್ರ ಮೋದಿ ಆ ನಿಟ್ಟಿನಲ್ಲಿ ಮತ್ತೊಂದು ದಿಟ್ಟ ಹೆಜ್ಜೆಯನ್ನು ತೆಗೆದುಕೊಂಡಿದ್ದಾರೆ. ಇಂದು ಬಹು ನಿರೀಕ್ಷಿತ ರಾಷ್ಟ್ರೀಯ ವಾಹನ ಗುಜರಿ ನೀತಿಗೆ ಚಾಲನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಇದು ಆತ್ಮನಿರ್ಭರ ಭಾರತ ಯೋಜನೆಯ ನಿಟ್ಟಿನಲ್ಲಿ ದೊಡ್ಡ ಮೈಲುಗಲ್ಲಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ವರ್ಷದ ಬಜೆಟ್ ಭಾಷಣದ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಷ್ಟ್ರೀಯ ವಾಹನಗಳ ಗುಜರಿ ನೀತಿಯನ್ನು ಪ್ರಸ್ತಾಪಡಿಸಿದ್ದರು. ಈ ವರ್ಷ ಈ ಪಾಲಿಸಿಯನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದರು. ಅದರಂತೆ ಇದೀಗ ರಾಷ್ಟ್ರೀಯ ವಾಹನಗಳ ಗುಜರಿ ನೀತಿಗೆ ಚಾಲನೆ ನೀಡಲಾಗಿದ್ದು, ಇದು ಭಾರತದಲ್ಲಿ ಮಾಲಿನ್ಯ ನಿಯಂತ್ರಿಸಲು ಹಾಗೂ ಪರಿಸರವನ್ನು ರಕ್ಷಿಸಲು ಬಹಳ ಅನುಕೂಲವಾಗಲಿದೆ. ಈ ಯೋಜನೆಯಲ್ಲಿ ಯುವಜನತೆ ಹಾಗೂ ಸ್ಟಾರ್ಟ್ಅಪ್ ಸಂಸ್ಥೆಗಳು ಹೆಚ್ಚಾಗಿ ತೊಡಗಿಸಿಕೊಂಡರೆ ಈ ನೀತಿಯ ಉದ್ದೇಶ ಯಶಸ್ವಿಯಾಗುತ್ತದೆ ಎಂದು ಹೇಳಿದ್ದಾರೆ.
ವಾಹನಗಳ ಗುಜರಿ ನೀತಿಗೆ ಚಾಲನೆ ನೀಡಿದ ಬಳಿಕ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಯಾವುದೇ ದೇಶದ ಆರ್ಥಿಕತೆಯಲ್ಲಿ ಚಲನಶೀಲತೆ ದೊಡ್ಡ ಪಾತ್ರವನ್ನು ವಹಿಸುತ್ತದೆ. ವಾಹನಗಳ ಮರುಬಳಕೆ ಈ ನೀತಿಯ ಪ್ರಮುಖ ಉದ್ದೇಶ. ಈ ನೀತಿಯು ದೇಶದಲ್ಲಿ 10,000 ಕೋಟಿ ರೂ.ಗಳ ಹೂಡಿಕೆಯನ್ನು ಆಕರ್ಷಿಸಲಿದೆ. ಹೆದ್ದಾರಿ ನಿರ್ಮಾಣದಲ್ಲಿ ಭಾರತ ತ್ಯಾಜ್ಯ ಉತ್ಪನ್ನವನ್ನು ಬಳಸುತ್ತಿದೆ. ಈ ವಾಹನ ಗುಜರಿ ನೀತಿಯು ಭಾರತದ ಅಭಿವೃದ್ಧಿ ಪಯಣದಲ್ಲಿ ದೊಡ್ಡ ಮೈಲುಗಲ್ಲಾಗಿದೆ ಎಂದು ಮೋದಿ ಹೇಳಿದ್ದಾರೆ.

ವಾಹನ ಗುಜರಿ ನೀತಿಯ ಬಗ್ಗೆ ಟ್ವಿಟ್ಟರ್ನಲ್ಲೂ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಪರಿಸರ ಸ್ನೇಹಿ ಯೋಜನೆಯ ಭಾಗವಾಗಿ ವಾಹನಗಳ ಗುಜರಿ ನೀತಿ ಜಾರಿಗೊಳಿಸಲಾಗಿದೆ. ಸ್ಟಾರ್ಟ್ಅಪ್ ಸಂಸ್ಥೆಗಳು ಹಾಗೂ ಯುವಕರು ಈ ಯೋಜನೆಯಲ್ಲಿ ಭಾಗಿಯಾಗಬೇಕು ಎಂದಿದ್ದಾರೆ.
ಹಳೆಯ ಕಾರನ್ನು ಗುಜರಿಗೆ ಹಾಕುವಾಗ ಒಂದು ಪ್ರಮಾಣಪತ್ರ ನೀಡಲಾಗುತ್ತದೆ. ಕಾರನ್ನು ಗುಜರಿಗೆ ಹಾಕಿದ ವ್ಯಕ್ತಿ ಇನ್ನುಮುಂದೆ ಹೊಸ ಕಾರನ್ನು ಖರೀದಿಸುವಾಗ ಆ ಪ್ರಮಾಣ ಪತ್ರವನ್ನು ತೋರಿಸಿದರೆ ರಿಜಿಸ್ಟ್ರೇಷನ್ ಅಥವಾ ನೋಂದಣಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಆತನಿಗೆ ರಸ್ತೆ ತೆರಿಗೆಯಲ್ಲೂ ವಿನಾಯಿತಿ ಸಿಗಲಿದೆ. ಈ ಹೊಸ ವಾಹನ ಗುಜರಿ ನೀತಿಯಿಂದ ಕಾರಿನ ಮಾಲೀಕರು ರಿಪೇರಿ ವೆಚ್ಚ ಹಾಗೂ ಇಂಧನದ ಮೇಲಿನ ಹಣ ಉಳಿಸಲು ಸಾಧ್ಯವಿದೆ. ಅಲ್ಲದೆ, ಈ ನೀತಿಯಿಂದ ಕಾರಿನ ಉತ್ಪಾದನೆಯ ಶೇ. 40ರಷ್ಟು ಕಚ್ಚಾವಸ್ತುಗಳ ವೆಚ್ಚ ಕಡಿಮೆಯಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.












