ವಿಜಯವಾಡ: ಹೆದ್ದಾರಿಯಲ್ಲಿ ದರೋಡೆ ಪ್ರಕರಣದಲ್ಲಿ ಇದೀಗ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಡಕಾಯಿತ ಅಬ್ದುಲ್ ಸಮದ್ ಮತ್ತು ಆತನ ತಂಡದ ಸದಸ್ಯರು ಹೆದ್ದಾರಿಯಲ್ಲಿ ರಾತ್ರಿ ವೇಳೆ ಸಂಚರಿಸುತ್ತಿದ್ದ ಲಾರಿಗಳನ್ನು ಟಾರ್ಗೆಟ್ ಮಾಡುತ್ತಿದ್ದರು.
ಪೊಲೀಸ್ ಸಮವಸ್ತ್ರ ಧರಿಸಿ ಹೆದ್ದಾರಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ತಂಡ ಸರಕು ತುಂಬಿದ ಲಾರಿಗಳನ್ನು ತಡೆದು ಬಳಿಕ ಚಾಲಕ ಮತ್ತು ಕ್ಲೀನರ್ ನ್ನು ಹತ್ಯೆ ಮಾಡಿ ಬಳಿಕ ಲಾರಿ ಸಮೇತ ಪರಾರಿಯಾಗುತ್ತಿದ್ದರು. ಲಾರಿ ಮತ್ತು ಸರಕನ್ನು ಗುಜುರಿ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು. ದರೋಡೆ ತಂಡದ ನಾಯಕ ಅಬ್ದುಲ್ ಸಮದ್ ನನ್ನು ಆಂಧ್ರ ಪ್ರದೇಶ ಪೊಲೀಸರು ಕರ್ನಾಟಕದಿಂದ ಬಂಧಿಸಿದ್ದರು.
2008ರಲ್ಲಿ ಪ್ರಕರಣದ ವಿಚಾರಣೆ ಆರಂಭವಾಗಿತ್ತು. ಇದೀಗ ವಾದ- ಪ್ರತಿವಾದ ಆಲಿಸಿದ ನ್ಯಾಯಾಧೀಶರು 12 ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದ್ದಾರೆ. 2008 ನವೆಂಬರ್ ತಿಂಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು. 11 ಹತ್ಯೆ ಪ್ರಕರಣಗಳಲ್ಲಿ ಆರೋಪಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿತ್ತು.
ತಮಿಳುನಾಡಿನ ಲಾರಿ ಮಾಲೀಕರೊಬ್ಬರು ತಮ್ಮ ಲಾರಿ ಚಾಲಕ ಕಬ್ಬಿಣದ ಅದಿರಿನ ಜತೆ ನಾಪತ್ತೆಯಾಗಿದ್ದಾನೆ ಎಂದು 2008 ಅಕ್ಟೋಬರ್ 17ರಂದು ಆಂಧ್ರಪ್ರದೇಶದ ಒಂಗೋಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದರು.