ವಿಟ್ಲ: ಶ್ರೀ ಗಣೇಶೋತ್ಸವ ಸಮಿತಿ, ಕೆಲಿಂಜ ಇದರ ಆಶ್ರಯದಲ್ಲಿ ನಡೆಯುವ 47ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.19 ರಂದು ಮಂಗಳವಾರ ’ಶ್ರೀ ನಿಕೇತನ ಮಂದಿರ’ ಕೆಲಿಂಜ ಇಲ್ಲಿ ವಿವಿಧ ವೈದಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೆಳಿಗ್ಗೆ ಗಂಟೆ 10ಕ್ಕೆ ಕಲ್ಮಲೆ ಪ್ರಗತಿಪರ ಕೃಷಿಕ ಸತ್ಯಸುಂದರ ಭಟ್ ದೀಪ ಪ್ರಜ್ವಲನೆ ನಡೆಸಲಿದ್ದಾರೆ. ಶ್ರೀ ಕ್ಷೇತ್ರ ಕೆಲಿಂಜ ಪ್ರಧಾನ ಅರ್ಚಕ ಮಹೇಶ್ ಭಟ್ ಮೂರ್ತಿ ಪ್ರತಿಷ್ಠೆ ಪುರೋಹಿತರಾಗಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಈಶ್ವರ ಭಟ್ ನಗ್ರಿಮೂಲೆ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಪುತ್ತೂರು ತಾ. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ರಾಮ್ದಾಸ್ ಶೆಟ್ಟಿ, ಪುತ್ತೂರು ಪ್ರೇರಣ ಉನ್ನತ ಶಿಕ್ಷಣ ತರಬೇತಿ ಕೇಂದ್ರದ ನಿರ್ದೇಶಕ ವಸಂತ ವೀರಮಂಗಲ, ವಿದ್ಯಾರಶ್ಮಿ ವಿದ್ಯಾಲಯ ಸವಣೂರು-ಪುತ್ತೂರು ಇಲ್ಲಿನ ಪ್ರಾಂಶುಪಾಲ ಸೀತಾರಾಮ ಕೇವಳ, ಕೆಲಿಂಜ ಹಿಂದೂ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಚೇತನ್ ಶೆಟ್ಟಿ ಪೆಲ್ತಡ್ಕ, ಕೆಲಿಂಜ ಶ್ರೀ ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ದೇವದಾಸ ರೈ ಮಾಡದಾರು ಭಾಗವಹಿಸಲಿದ್ದಾರೆ.
2022-23ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ 1.00 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದ್ದು, ಮಧ್ಯಾಹ್ನ 3.00ಗಂಟೆಗೆ ಮಹಾಮಂಗಳಾರತಿ ಬಳಿಕ ಶೋಭಾಯಾತ್ರೆ ನಡೆಯಲಿದೆ. ಬಳಿಕ ಕುಣಿತ ಭಜನೆಯ ಮೂಲಕ ಶೋಭಾಯಾತ್ರೆಯು ಹೊರಟು ಒಕ್ಕೆತ್ತೂರು ಹೊಳೆಯಲ್ಲಿ ಜಲಸ್ತಂಭನ ನಡೆಯಲಿದೆ.
ದಿನಾಂಕ 17-9-2023 ನೇ ಆದಿತ್ಯವಾರದಂದು ’ಆಟೋಟ ಸ್ಪರ್ಧೆ’ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.