ವಿಟ್ಲ: ಕ್ಯಾಂಪ್ಕೋ ರೈತರಿಗೆ ವಿಶ್ವಾಸವನ್ನು ತುಂಬುವ ಕಾರ್ಯ ಮಾಡುತ್ತಿದೆ. ಪ್ರಾದೇಶಿಕ ಒಪ್ಪಂದಗಳಿಗೆ ಸಹಿ ಹಾಕದೆ ಸರ್ಕಾರಗಳು ಸಹಕಾರ ನೀಡಿದ ಕಾರಣ ಅಡಿಕೆಗೆ ಸ್ಥಿರ ಮಾರುಕಟ್ಟೆ ಉಳಿದಿದೆ. ರೈತರು ಗರಿಷ್ಠಮಟ್ಟದಲ್ಲಿ ಸೇವೆಯನ್ನು ಉಪಯೋಗಿಸಿಕೊಳ್ಳಬೇಕು. ಸಂಸ್ಥೆಯನ್ನು ರೈತರು ಬಳಸಿದಷ್ಟು ಬೆಳೆಯಲು ಸಾಧ್ಯ ಎಂದು ಕ್ಯಾಂಪ್ಕೋ ನಿಕಟಪೂರ್ವ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಹೇಳಿದರು.
ಕ್ಯಾಂಪ್ಕೋ ನಿಯಮಿತದ ಅಡ್ಯನಡ್ಕ ಶಾಖೆಯಲ್ಲಿ ಕಾಳುಮೆಣಸು ಖರೀದಿ ಪ್ರಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಭಾರತವನ್ನು ವಿದೇಶಿಗರು ಕಾಳುಮೆಣಸಿನ ಮೂಲಕ ಗುರುತಿಸಿದ್ದಾರೆ. ಕಾಳುಮೆಣಸಿನ ವಿವಿಧ ಉತ್ಪನ್ನಗಳ ಬಗ್ಗೆ ಅಧ್ಯಯನ ನಡೆಸಿ, ನಿರಂತರ ಖರೀದಿಗೆ ಚಾಲನೆ ನೀಡಲಾಗುತ್ತಿದೆ. ರಾಜ್ಯ ಹಾಗೂ ಹೊರ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಗೋದಾಮುಗಳನ್ನು ನಿರ್ಮಾಣ ಮಾಡುವ ಕಾರ್ಯ ಮಾಡಲಿದೆ ಎಂದು ತಿಳಿಸಿದರು.
ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರೀ ಉಪಸ್ಧಿತರಿದ್ದು ಮಾತನಾಡಿದ ಅವರು ಕರೊನಾ ಸಮಯದಲ್ಲಿಯೂ ಬೆಳೆಗಾರರ ಜತೆಗೆ ನಿಂತು ಧೈರ್ಯ ತುಂಬುವ ಕಾರ್ಯವನ್ನು ಕ್ಯಾಂಪ್ಕೋ ಮಾಡಿದೆ. ಕ್ಯಾಂಪ್ಕೋ ಮೂಲಕ ಉತ್ತಮ ಗುಣಮಟ್ಟದ ಕಾಳುಮೆಣಸಿನ ಸಸಿಗಳನ್ನು ವಿತರಣೆ ಮಾಡುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ಅಡ್ಯನಡ್ಕ ವಾರಣಾಸಿ ಫಾರ್ಮ್ಸ್ ನ ವಿ. ಕೃಷ್ಣಮೂರ್ತಿ ವಾರಣಾಶಿ ಅವರು ಮುಳಿಯ ನಾರಾಯಣ ಭಟ್ ಅವರಿಂದ ಮೊದಲ ಕಾಳುಮೆಣಸು ಖರೀದಿ ಮಾಡುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ ವಹಿಸಿದ್ದರು.
ಕ್ಯಾಂಪ್ಕೋ ನಿರ್ದೇಶಕರಾದ ರಾಘವೇಂದ್ರ ಭಟ್ ಕೆದಿಲ, ಪುತ್ತೂರು ಪ್ರಾದೇಶಿಕ ಮುಖ್ಯ ಅಧಿಕಾರಿ ಗೋವಿಂದ ಭಟ್ ಎಸ್., ಶಾಖೆಯ ಸಿಬ್ಬಂದಿಗಳಾದ ಅವಿನಾಶ್, ರಾಮಕೃಷ್ಣ, ಗೋವಿಂದ ನಾಯ್ಕ, ಸೇಸಪ್ಪ ನಾಯ್ಕ, ಬಾಲಕೃಷ್ಣ ಹಾಗೂ ಸಕ್ರಿಯ ಸದಸ್ಯರು ಉಪಸ್ಥಿತರಿದ್ದರು.
ಕಾಳುಮೆಣಸು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಭಾಸ್ಕರನ್ ಫ್ರೇಮ್ಜಿ ಬಿ. ಪ್ರಸ್ತಾವನೆಗೈದರು. ಅಡ್ಯನಡ್ಕ ಶಾಖಾ ವ್ಯವಸ್ಥಾಪಕ ದಿನೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.