ವಿಟ್ಲ: ಕಾರ್ತಿಕ್ ಫ್ರೆಂಡ್ಸ್ ಕ್ಲಬ್(ರಿ) ಚಂದಳಿಕೆ ವಿಟ್ಲ, ಸಾರ್ವಜನಿಕ ಗಣೇಶೋತ್ಸವ ಬೆಳ್ಳಿ ಹಬ್ಬ ಸಮಿತಿ ಚಂದಳಿಕೆ, ವಿಟ್ಲ ಇದರ 25ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ಬೆಳ್ಳಿ ಹಬ್ಬ ಕ್ರೀಡೋತ್ಸವವು ಸೆ.03ರಂದು ಬೆಳಿಗ್ಗೆ 9.00ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಚಂದಳಿಕೆ ವಿಟ್ಲದಲ್ಲಿ ನಡೆಯಿತು.
ಈ ವೇಳೆ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಸಹಯೋಗದಲ್ಲಿ ಬೆಳಗ್ಗೆ 9.00 ರಿಂದ ಸಂಜೆ 4.00ರವರೆಗೆ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಅಭಿಯಾನ (ಅಂಚೆ ಇಲಾಖೆಯ ಜನೋಪಯೋಗಿ ಸೇವಾ ಸೌಲಭ್ಯಗಳು) ನಡೆಯಿತು.
ಬೆಳ್ಳಿಹಬ್ಬ ಕ್ರೀಡೋತ್ಸವ ಕಾರ್ಯಕ್ರಮವನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿ ಶುಭಹಾರೈಸಿದರು. ಸಭಾಧ್ಯಕ್ಷತೆಯನ್ನು ಸಾರ್ವಜನಿಕ ಗಣೇಶೋತ್ಸವ ಗೌರವ ಸಮಿತಿ ಚಂದಳಿಕೆ ಇದರ ಅಧ್ಯಕ್ಷ ಶಂಕರ ಭಟ್ ಬದನಾಜೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಟ್ಲ ಆರಕ್ಷಕ ಠಾಣೆಯ ನೀರಿಕ್ಷಕರು ನಾಗರಾಜ ಎಚ್.ಇ, ವಿದ್ಯಾವರ್ಧಕ ಸಂಘ ದ.ಕ.ಜಿ.ಪಂ ಶಾಲೆ ಚಂದಳಿಕೆ ವಿಟ್ಲ ಇದರ ಅಧ್ಯಕ್ಷರು ಭವಾನಿ ರೈ ಕೊಲ್ಯ, ದ.ಕ.ಜಿ.ಪಂ ಚಂದಳಿಕೆ ಶಾಲೆಯ ಮುಖ್ಯೋಪಾಧ್ಯಾಯ ವಿಶ್ವನಾಥ ಗೌಡ ಕುಳಾಲು, ಬಂಟ್ವಾಳ ಅಂಚೆ ಇಲಾಖೆ ಉಪವಿಭಾಗದ ಮೇಲ್ವಿಚಾರಕ ದೇವರಾಜ್ ಹೆಬ್ಬಾರ್, ಅಂಚೆಕಚೇರಿ ವಿಟ್ಲ ವಿಭಾಗದ ಬಾಲಕೃಷ್ಣ ನಾಯ್ಕ ಭಾಗವಹಿಸಿದ್ದರು.
ಬಳಿಕ ಅಂಗನವಾಡಿ, ಶಾಲಾ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಸ್ಪರ್ಧೆಗಳು ನಡೆಯಿತು.