ಕಾರ್ಕಳ: ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಅಕ್ರಮ ಎನ್ನಲಾದ ಮತಾಂತರ ಕೇಂದ್ರಕ್ಕೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ಸೆ.10ರ ಬೆಳಿಗ್ಗೆ ನಡೆದಿದೆ.
ಸುಮಾರು 35 ಕ್ಕೂ ಅಧಿಕ ಹಿಂದೂ ಧರ್ಮಿಯರನ್ನು ಸೇರಿಸಿಕೊಂಡು ಪ್ರಗತಿ ಕಾಂಪೌಂಡ್ ಬಳಿ ಕ್ರೈಸ್ತರ ಪ್ರಾರ್ಥನೆ ನೆಪದಲ್ಲಿ ಮತಾಂತರ ನಡೆಯುತ್ತಿರುವ ಬಗ್ಗೆ, ವದಂತಿ ಹಬ್ಬಿದ ಹಿನ್ನೆಲೆ ಕಾರ್ಕಳದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕೇಂದ್ರಕ್ಕೆ ದಾಳಿ ಮಾಡಿದ್ದಾರೆ.
ದಿಢೀರ್ ದಾಳಿಯಿಂದಾಗಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹಾಗೂ ಪ್ರಾರ್ಥನೆ ಆಯೋಜಿಸಿದವರ ನಡುವೆ ಘರ್ಷಣೆ ಉಂಟಾಗಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಈ ಸಂದರ್ಭ ಕಾರ್ಕಳ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಪ್ರಾರ್ಥನೆ ನಡೆಸುತ್ತಿದ್ದವರು ಯಾವುದೇ ಅನುಮತಿ ಪಡೆಯದೇ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ವಿವಿಧ ಆಮಿಷ ಮತ್ತು ಒತ್ತಡಗಳ ಮೂಲಕ ಅನೇಕ ಹಿಂದೂ ಕುಟುಂಬಗಳನ್ನು ಕ್ರೈಸ್ತ ಮತಕ್ಕೆ ಮತಾಂತರಿಸುವ ಹುನ್ನಾರ ನಡೆಯುತ್ತಿದ್ದು, ಕಾರ್ಕಳ ಆಸುಪಾಸು 16ಕ್ಕೂ ಅಧಿಕ ಪ್ರಾರ್ಥನಾ ಕೇಂದ್ರಗಳಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ತಿಳಿಸಿರುತ್ತಾರೆ.