ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿ ವತಿಯಿಂದ ಕೊರೊನ ಟಾಸ್ಕ್ ಪೋರ್ಸ್ ಸಭೆಯು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಚಂದ್ರಕಾಂತಿಯವರ ಅಧ್ಯಕ್ಷತೆಯಲ್ಲಿ ವಿಟ್ಲ ಸರ್ಕಾರಿ ಶಾಲೆಯಲ್ಲಿ ನಡೆಯಿತು.
ವೆನ್ಲಾಕ್ ಆಸ್ಪತ್ರೆಯ ನೋಡಲಾಧಿಕಾರಿ ನವೀನ್ ಚಂದ್ರರವರು ಮಾತನಾಡಿ ವಿಟ್ಲ ಭಾಗದಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿದೆ. ಕೊರೊನಾ ನಿಯಂತ್ರಿಸಲು ಜನರ ಸಹಕಾರ ಅತ್ಯಗತ್ಯವಾಗಿದೆ. ಕೊರೊನಾ ಪಾಸಿಟಿವ್ ಬಂದವರು ಹೊರಗಡೆ ತಿರುಗಾಟ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಮತ್ತು ಬೆಂಗಳೂರಿನಿಂದ ಬಂದವರು ಕಡ್ಡಾಯವಾಗಿ ಮನೆಯಲ್ಲಿ ಕ್ವಾರಂಟೈನ್ ಆಗಬೇಕು. ಈ ಬಗ್ಗೆ ಇಲಾಖೆಗೆ ಮಾಹಿತಿ ನೀಡಬೇಕು.
ವಿಟ್ಲ ಪೇಟೆಯಲ್ಲಿ ಅನಾವಶ್ಯಕವಾಗಿ ತಿರುಗಾಟ ನಡೆಸುವವರ ವಿರುದ್ದ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ವಿಟ್ಲ ಪೇಟೆಯ ಹೊರ ಭಾಗದವರು ತಮ್ಮ ಭಾಗದಲ್ಲಿ ಸಾಮಗ್ರಿ ಖರೀದಿಸಬೇಕು ಎಂದು ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಕಲ್ಲಕಟ್ಟ, ವಿಟ್ಲ ಪೊಲೀಸ್ ಠಾಣೆಯ ಪ್ರೋಬೆಷನರಿ ಎಸ್ಐ ಮಂಜುನಾಥ್, ಮುಖ್ಯಾಧಿಕಾರಿ ಮಾಲಿನಿ, ಆರೋಗ್ಯ ಇಲಾಖೆಯ ಹಿರಿಯ ನಿರೀಕ್ಷಕಿ ಕುಸುಮಾ, ಪಟ್ಟಣ ಪಂಚಾಯಿತಿ ಸದಸ್ಯರಾದ ಅರುಣ್ ಎಂ ವಿಟ್ಲ, ರವಿಪ್ರಕಾಶ್, ಶ್ರೀಕೃಷ್ಣ, ಇಂದಿರಾ ಅಡ್ಯಾಲಿ, ಜಯಂತ, ರಾಮ್ ದಾಸ್ ಶೆಣೈ ವಿಟ್ಲ, ಅಶೋಕ್ ಕುಮಾರ್ ಶೆಟ್ಟಿ, ಸಂಧ್ಯಾ ಮೋಹನ್, ಸುನೀತಾ ಕೋಟ್ಯಾನ್, ವಿಟ್ಲ ಕಂದಾಯ ನಿರೀಕ್ಷಕ ದಿವಾಕರ, ಗ್ರಾಮ ಕರಣಿಕ ಪ್ರಕಾಶ್ ಉಪಸ್ಥಿತರಿದ್ದರು.