Sunday, April 28, 2024
spot_imgspot_img
spot_imgspot_img

ವಿಟ್ಲ: (ಅ.20-24) ಶ್ರೀ ದೇವತಾ ಸಮಿತಿ ವಿಟ್ಲ ಇದರ ವತಿಯಿಂದ 52ನೇ ವರ್ಷದ ವಿಟ್ಲ ದಸರಾ-2023

- Advertisement -G L Acharya panikkar
- Advertisement -

ವಿಟ್ಲ: ಶ್ರೀ ದೇವತಾ ಸಮಿತಿ ವಿಟ್ಲ ಇದರ ವತಿಯಿಂದ 52ನೇ ವರ್ಷದ ವಿಟ್ಲ ದಸರಾ 2023- ದಿನಾಂಕ 20-10-2023 ಶುಕ್ರವಾರದಿಂದ ದಿನಾಂಕ 24-10-2023 ಮಂಗಳವಾರದವರೆಗೆ ವಿಟ್ಲದ ಶ್ರೀಮತ್ ಅನಂತೇಶ್ವರ ದೇವಸ್ಥಾನದ ’ಅನಂತ ಸದನ’ ದಲ್ಲಿ ನಡೆಯಲಿದೆ.

ದಿನಾಂಕ 20-10-2023 ಶುಕ್ರವಾರದಂದು ಪೂರ್ವಾಹ್ನ ಗಂಟೆ 7 ಕ್ಕೆ ಗಣಪತಿ ಹವನ, ಗಂಟೆ 8 ಕ್ಕೆ ಶ್ರೀ ಅನಂತೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ, 8.30ಕ್ಕೆ ಮಹತೋಭಾರ ಶ್ರೀಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ, 9ಕ್ಕೆ ಶ್ರೀ ಮಾತೆಯ ವಿಗ್ರಹವನ್ನು ಶ್ರೀ ಚಂದ್ರನಾಥ ಸ್ವಾಮಿ ಜೈನ ಬಸದಿಯಿಂದ ಉತ್ಸವದ ಸ್ಥಳಕ್ಕೆ ಪ್ರತಿಷ್ಠಾ ವಿಧಿ ಕಾರ್ಯಕ್ರಮಕ್ಕೆ ಮೆರವಣಿಗೆಯಲ್ಲಿ ತರುವುದು. ಬೆಳಿಗ್ಗೆ ಗಂಟೆ 10.20ಕ್ಕೆ ವೇದಮೂರ್ತಿ ಎಂ.ವಿಕಾಸ್ ಭಟ್ ಪುರೋಹಿತರು ಶ್ರೀರಾಮ ಮಂದಿರ ವಿಟ್ಲ ಇವರಿಂದ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ ನಡೆಯಲಿದೆ. ವಿಟ್ಲ ಶ್ರೀ ದೇವತಾ ಸಮಿತಿ ಅಧ್ಯಕ್ಷ ಎಂ.ರಾಧಾಕೃಷ್ಣ ನಾಯಕ್ ಧ್ವಜಾರೋಹಣ ನಡೆಸಲಿದ್ದಾರೆ. ಗಂಟೆ 11ಕ್ಕೆ ಉದ್ಘಾಟನಾ ಸಮಾರಂಭದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್‍ ರೈ ಕೋಡಿಂಬಾಡಿ ದೀಪಪ್ರಜ್ವಲನೆ ನಡೆಸಲಿದ್ದಾರೆ. ಪುತ್ತೂರು ತಾಲೂಕು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ರಾಮದಾಸ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ವಿಟ್ಲ ಲಯನ್ಸ್ ಕ್ಲಬ್‌ನ ಅಧ್ಯಕ್ಷೆ ಲಯನ್ ಜಲಜಾಕ್ಷಿ ಬಾಲಕೃಷ್ಣ ಗೌಡ, ವಿಟ್ಲ ರೋಟರಿ ಕ್ಲಬ್‌ನ ಅಧ್ಯಕ್ಷ ಕಿರಣ್ ಕುಮಾರ್‍ ಬ್ರಹ್ಮಾವರ, ವಿಟ್ಲ ಜೆಸಿಐ ಅಧ್ಯಕ್ಷ ಜೆ.ಸಿ ಪರಮೇಶ್ವರ ಹೆಗಡೆ ಭಾಗವಹಿಸಲಿದ್ದಾರೆ. ಮಧ್ಯಾಹ್ನ ಗಂಟೆ 1 ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ಗಂಟೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಶ್ರೀಮತಿ ಗಾಯತ್ರಿ ದೇವರಾಜ್ ವಿಟ್ಲ ಇವರಿಂದ ವೀಣಾವಾದನ ನಡೆಯಲಿದೆ. ವೀಣಾವಾದನದೊಂದಿಗೆ ಗಣರಾಜ್ ಭಟ್ ’ನಾದ ಬ್ರಹ್ಮ ಆರ್ಕೆಸ್ಟ್ರಾ ಮಂಗಳೂರು ಇವರಿಂದ ಭಕ್ತಿ ಸಂಗೀತ ನಡೆಯಲಿದೆ. ಗಂಟೆ 7.30ಕ್ಕೆ ಡಾ|ವಿಜಯ್ ಕುಮಾರ್‍ ಪಾಟೀಲ್ ದಾರವಾಡ ಮತ್ತು ಬಳಗದವರಿಂದ ಭಜನ್ ಸಂಧ್ಯಾ ನಡೆಯಲಿದೆ. ರಾತ್ರಿ ಗಂಟೆ 9.30ಕ್ಕೆ ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ದಿನಾಂಕ 21-10-2023 ಶನಿವಾರ ಪೂರ್ವಾಹ್ನ ಪ್ರಸನ್ನ ಪೂಜೆ, ಸಂಗೀತ ಸ್ಪರ್ಧೆ(ಭಕ್ತಿಗೀತೆಗಳು ಮಾತ್ರ), ವಂದೇ ಮಾತರಂ(ಕಂಠಪಾಠ), ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ಗಂಟೆ 3 ರಿಂದ ರಂಗವಲ್ಲಿ ಸ್ಪರ್ಧೆ ನಡೆಯಲಿದೆ. ಸಂಜೆ ಗಂಟೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಶ್ರೀ ವಿಠೋಭಾಪಾಂಡುರಂಗ ಭಜನಾ ಮಂಡಳಿ ವಿಟ್ಲ ಇವರಿಂದ ’ಭಜನಾ ಸಂಕೀರ್ತನೆ’ ನಡೆಯಲಿದೆ. ಬಳಿಕ ಶ್ರೀ ವಿಜಯ್ ಕುಮಾರ್‍ ಭಟ್ ಮತ್ತು ಬಳಗ, ಶ್ರೀ ಸಾರಸ್ವತ ಭಜನಾ ಮಂಡಳಿ ವಿಟ್ಲ ಇವರಿಂದ ಭಜನಾಮೃತ ಸುಧಾತನಯ’ ರಾತ್ರಿ ಪ್ರಸನ್ನ ಪೂಜೆ ನಡೆದು ಪ್ರಸಾದ ವಿತರಣೆ ನಡೆಯಲಿದೆ.

ದಿನಾಂಕ 22-10-2023ನೇ ಆದಿತ್ಯವಾರ ಪೂವಾಹ್ನ ಪ್ರಸನ್ನ ಪೂಜೆ, ಬಳಿಕ ಭಗವದ್ಗೀತಾ-ಗೀತಾ ಕಂಠಪಾಠ ಸ್ಪರ್ಧೆ ಅಧ್ಯಾಯ 15ರ ಮೊದಲ 10 ಶ್ಲೋಕಗಳು, ಹೂಹಾರ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ಗಂಟೆ 3ರಿಂದ ಪ್ರಬಂಧ ಸ್ಪರ್ಧೆ, ಸಂಜೆ ಗಂಟೆ 7 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಕನಾಟಕ ಸ್ವರ ಕಂಠೀರವ ’ಸ್ವರ ತಪಸ್ವಿ’ ಜೂನಿಯರ್‍ ಡಾ|ರಾಜ್‌ಕುಮಾರ್‍ ಖ್ಯಾತಿಯ ಶ್ರೀ ಜಗದೀಶ್ ಆಚಾರ್ಯ ಶಿವಪುರ ಮತ್ತು ಬಳಗ ಮಂಗಳೂರು ಇವರಿಂದ ’ಸುಲಲಿತ ಭಾವ ಗಾನಾಮೃತ’ ನಡೆಯಲಿದೆ. ರಾತ್ರಿ ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ದಿನಾಂಕ 23-10-2023ನೇ ಸೋಮವಾರ ಪೂರ್ವಾಹ್ನ ಪ್ರಸನ್ನ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಗಂಟೆ 7 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಕು.ಗ್ರೀಷ್ಮಾಕಿಣಿ ಮಂಗಳೂರು ಮತ್ತು ಬಳಗದವರಿಂದ ’ಭಕ್ತಿ ಕುಸುಮಾಂಜಲಿ’ ನಡೆಯಲಿದೆ. ರಾತ್ರಿ ಗಂಟೆ 9.30ಕ್ಕೆ ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ದಿನಾಂಕ 24-10-2023ನೇ ಮಂಗಳವಾರ ವಿಜಯದಶಮಿ ಪೂವಾಹ್ನ ಪ್ರಸನ್ನ ಪೂಜೆ, ಅಕ್ಷರ ಅಭ್ಯಾಸ, ಮಧ್ಯಾಹ್ನ ಗಂಟೆ 1 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ಗಂಟೆ 3ರಿಂದ ಕರ್ನಾಟಕ ಕಲಾಶ್ರೀ ಡಾ|ಪಿ.ಕೆ ದಾಮೋದರ್‍ ಇವರಿಂದ ವಾದ್ಯಗೋಷ್ಟಿ ನಡೆಯಲಿದೆ. ಗಂಟೆ 4 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಪಿ.ಸುಬ್ರಾಯ ಪೈ ಉದ್ಯಮಿ ವಿಟ್ಲ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಡಿಷನಲ್ ಸುಪರಿಡೆಂಟ್ ಆಫ್ ಪೊಲೀಸ್ ಕುಮಾರ್‌ಚಂದ್ರ, ಮೂಡುಶೆಡ್ಡೆ ಸರಕಾರಿ ಕ್ಷಯ ಮತ್ತು ಎದೆ ರೋಗ ಆಸ್ಪತ್ರೆಯ ಉಪ ಮುಖ್ಯ ವೈದ್ಯಾಧಿಕಾರಿ ಡಾ|ಜಗದೀಶ್, ಪುತ್ತೂರು ವಿವೇಕಾನಂದ ಬಿ.ಯಡ್ ಕಾಲೇಜಿನ ಪ್ರಾಂಶುಪಾಲೆ ಡಾ|ಶೋಭಿತಾ ಸತೀಶ್ ಭಾಗವಹಿಸಲಿದ್ದಾರೆ. ವಿಟ್ಲ ಲಯನ್ಸ್‌ ಸಿಟಿ ಅಧ್ಯಕ್ಷ ಜಯರಾಮ್ ಬಲ್ಲಾಳ್ ಬಹುಮಾನ ವಿತರಿಸಲಿದ್ದಾರೆ. ಹಿಂದೂ ಯುವಸೇನೆ ವಿಟ್ಲ ಘಟಕದ ಅಧ್ಯಕ್ಷ ಪಲಿಮಾರು ರಘುಪತಿ ಪೈ ಗೌರವ ಉಪಸ್ಥಿತರಿರುವರು. ಸಂಜೆ ವಿಸರ್ಜನಾ ಆರತಿ ನಡೆಯಲಿದೆ. ಗಂಟೆ 7ಕ್ಕೆ ಶ್ರೀ ದೇವಿಯ ವೈಭವದ ಶೋಭಾಯಾತ್ರೆಯ ಬಳಿಕ ಶ್ರೀ ಅನಂತೇಶ್ವರ ದೇವಸ್ಥಾನದ ಕೆರೆಯ ಬಳಿ ಪೂಜೆ ವಂದೇ ಮಾತರಂ, ಧ್ವಜಾವತರಣ, ನಂತರ ಕೆರೆಯಲ್ಲಿ ವಿಗ್ರಹ ವಿಸರ್ಜನೆ ನಡೆಯಲಿದೆ.

ದಿನಾಂಕ 15-10-2023ನೇ ಆದಿತ್ಯವಾರ ಸಂಜೆ ಗಂಟೆ 6 ಕ್ಕೆ ಶ್ರೀಮತ್ ಅನಂತೇಶ್ವರ ದೇವಸ್ಥಾನದ ಸನ್ನಿಧಿಯಿಂದ ಹೊರಟು ನಗರ ಪೂರ್ತಿ ಸಂಕೀರ್ತನೆ ನಡೆಸಿ ಶ್ರೀ ದೇವಿಯ ಸನ್ನಿಧಿಯಲ್ಲಿ ಸಮಾಪ್ತಿಗೊಳ್ಳಲಿದೆ.

ಪ್ರತೀದಿನ ಮಧ್ಯಾಹ್ನ ಗಂಟೆ 2ರಿಂದ ಗಂಟೆ 4ರ ತನಕ ಶ್ರೀ ಮಾತೆಯ ಅಲಂಕಾರ ನಿಮಿತ್ತ ಶ್ರೀ ಮಾತೆಯ ದರ್ಶನವಿರುವುದಿಲ್ಲ.

- Advertisement -

Related news

error: Content is protected !!