ವಿಟ್ಲ : ಪೆರಾಜೆ – ಮಾಣಿಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ 3 ದಿನಗಳ ಶಾಲಾ ಮಟ್ಟದ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಸ್ಪರ್ಧೆಗಳ ಉತ್ಸವವಾದ ವಿಕಾಸೋತ್ಸವ -2023 ಇದರ ಉದ್ಘಾಟನಾ ಕಾರ್ಯಕ್ರಮವು ಬಾಲವಿಕಾಸ ಆಡಿಟೋರಿಯಂನಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.
ಈ ಸಮಾರಂಭಕ್ಕೆ ಮುಖ್ಯಅತಿಥಿಯಾಗಿ ಆಗಮಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತೊಕ್ಕೊಟ್ಟಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಪ್ರಾಂಶುಪಾಲರಾದ ವಿದ್ಯಾ ಕಾಮತ್ ಜಿ, ” ವಿಕಾಸೋತ್ಸವದಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸೃಜನಶೀಲ ಪ್ರತಿಭೆಯನ್ನು ಬೆಳಕಿಗೆ ತರಲು ಉತ್ತಮ ವೇದಿಕೆಯಾಗಿದೆ. ಇಂತಹ ಅವಕಾಶಗಳು ಬಾಲ್ಯದಲ್ಲಿಯೇ ಉತ್ತಮ ಕೇಳುಗರನ್ನು ಹಾಗೂ ಅತ್ಯುತ್ತಮ ವಾಗ್ಮಿಗಳನ್ನು ಸೃಷ್ಟಿಸಲು ಸಹಕರಿಸುತ್ತದೆ. ಸ್ಪರ್ಧೆಗಳ ಆಯೋಜನೆಯಲ್ಲೂ ಬಾಲವಿಕಾಸ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿರುವುದು ಶ್ಲಾಘನೀಯ ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷರಾದ ಪ್ರಹ್ಲಾದ್ ಶೆಟ್ಟಿ ಜೆ ಯವರು, ನೂತನ ಬಾಲವಿಕಾಸವು ಸುಸಜ್ಜಿತವಾಗಿ ರೂಪುಗೊಳ್ಳುವಲ್ಲಿ ವಿದ್ಯಾ ಕಾಮತ್ ಜಿ ಯವರ ಸಹಕಾರವನ್ನು ಸ್ಮರಿಸಿಕೊಂಡು, ಬಾಲವಿಕಾಸ ವಿದ್ಯಾಸಂಸ್ಥೆಯ ಪರವಾಗಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸುಜಯ ಪಿ ಶೆಟ್ಟಿ, ಬಾಲವಿಕಾಸ ಟ್ರಸ್ಟ್ ನ ಕಾರ್ಯದರ್ಶಿ ಮಹೇಶ್ ಜೆ ಶೆಟ್ಟಿ, ಆಡಳಿತಾಧಿಕಾರಿ ರವೀಂದ್ರ ದರ್ಬೆ, ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ವಿ ಶೆಟ್ಟಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಕಸ್ತೂರಿ ಪಿ ಶೆಟ್ಟಿ ಉಪಸ್ಥಿತರಿದ್ದರು.
ಶಾಲೆಯ ಆಡಳಿತಾಧಿಕಾರಿ ರವೀಂದ್ರ ದರ್ಬೆ ಸ್ವಾಗತಿಸಿ, ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ವಿ.ಶೆಟ್ಟಿ ವಂದಿಸಿದರು. ಸಹ ಶಿಕ್ಷಕಿಯರಾದ ಸುಧಾ ಎನ್ ರಾವ್ ಮತ್ತು ಶಿಕ್ಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಕಾರ್ಯಕ್ರಮದ ನಂತರ ವಿವಿಧ ವೇದಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಹಲವಾರು ಸ್ಪರ್ಧೆಗಳು ನಡೆದವು.