ವಿಟ್ಲ : ಸಿದ್ಧಿವಿನಾಯಕ ಯುವಕ ಮಂಡಲ ಧರ್ಮನಗರ –ಕಂಬಳಬೆಟ್ಟು ವತಿಯಿಂದ ತುಳುನಾಡ ಪೆರ್ಮೆದ ಕೆಸರ್ದ ಕಂಡಡ್ ಒಂಜಿ ದಿನ ಕಾರ್ಯಕ್ರಮವು ಆ.20ರಂದು ಕಾರ್ಯಾಡಿ ಬೈಲಿನಲ್ಲಿ ನಡೆಯಲಿದೆ.
ಯುವಕ ಮಂಡಲ ವತಿಯಿಂದ ಮೂರೂ ಗ್ರಾಮಗಳನ್ನೊಳಗೊಂಡ ಹಿಂದು ಬಾಂಧವರ ತುಳುನಾಡ ಜಾನಪದ ಕ್ರೀಡೆ ಮತ್ತು ಆಚರಣೆಗಳನ್ನು ನೆನಪಿಸುವ ಸಲುವಾಗಿ ಮತ್ತು ಯುವಜನತೆಯ ಮನಸ್ಸುಗಳನ್ನು ದೇಶ ಭಾಷೆಗಳೊಂದಿಗೆ ಒಗ್ಗೂಡಿಸುವ ಕಾರ್ಯಕ್ರಮವೇ ಕೆಸರ್ಡೊಂಜಿ ದಿನ. ಬೈಕ್ ರ್ಯಾಲಿಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡು ಬಳಿಕ ಉದ್ಘಾಟನೆ, ವಿವಿಧ ಆಟೋಟ ಸ್ಪರ್ಧೆಗಳು, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಭೋಜನ, ಸಮಾರೋಪ ಸಮಾರಂಭ, ಬಹುಮಾನ ವಿತರಣೆ ನಡೆಯಲಿದೆ.
ದೀಪ ಪ್ರಜ್ವಲನೆಯನ್ನು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಮುಂಡ್ರಬೈಲು ಇದರ ಧರ್ಮದರ್ಶಿ ಕೃಷ್ಣಪ್ಪ ಪೂಜಾರಿ ನೆರವೇರಿಸಲಿದ್ದು, ಕಾರ್ಯಕ್ರಮವನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ಸಿದ್ದಿವಿನಾಯಕ ಯುವಕ ಮಂಡಲ ಧರ್ಮನಗರ ಇದರ ಅಧ್ಯಕ್ಷ ರಂಜಿತ್ ನೆಕ್ಕರೆ ವಹಿಸಲಿದ್ದಾರೆ.