ಬಂಟ್ವಾಳ: ಮಾಣಿಲ ಗ್ರಾ.ಪಂ ಉಪಚುನಾವಣೆಯ ಮತ ಎಣಿಕೆಯು ಬಂಟ್ವಾಳದ ಮಿನಿ ವಿಧಾನಸೌಧದಲ್ಲಿ ಬುಧವಾರ ನಡೆದಿದ್ದು, ಇದರಲ್ಲಿ ವಿಷ್ಣುಕುಮಾರ್ ಆಯ್ಕೆಯಾಗಿದ್ದಾರೆ.
ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ರಾಜೇಶ್ ಕುಮಾರ್ ಬಾಳೆಕಲ್ಲು ಎರಡರಲ್ಲೂ ಜಯಗಳಿಸಿದ ಹಿನ್ನೆಲೆಯಲ್ಲಿ ಒಂದು ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಹಿನ್ನೆಲೆ ಈ ಚುನಾವಣೆ ನಡೆದಿತ್ತು. ಮಾಣಿಲ, ಪುದುವಿನ ಒಂದು ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು, ಇವುಗಳ ಪೈಕಿ ಪುದು ಗ್ರಾ.ಪಂನಲ್ಲಿ ವೀಣಾ ಎಂಬವರು ಆಯ್ಕೆಯಾಗಿದ್ದ ಹಿನ್ನಲೆಯಲ್ಲಿ ಮಾಣಿಲದಲ್ಲಿ ಮಾತ್ರ ಚುನಾವಣೆ ನಡೆದಿತ್ತು.
ಮಾಣಿಲದ ಒಂದು ಸ್ಥಾನಕ್ಕೆ ಎಂಟು ನಾಮಪತ್ರಗಳು ಸಲ್ಲಿಕೆಯಾಗಿತ್ತು. ಇದರಲ್ಲಿ 5 ನಾಮಪತ್ರಗಳನ್ನು ಹಿಂಪಡೆಯಲಾಗಿದ್ದು, ಮೂವರು ಅಭ್ಯರ್ಥಿಗಳಾದ ಮೊಯ್ದೀನ್ ಕುಞ , ವಿಷ್ಣುಕುಮಾರ್ ಕೊಮ್ಮುಂಜೆ, ಸೂರಜ್ ರೈ ಕೆಳಗಿನಮನೆ ಚುನಾವಣಾ ಸ್ಪರ್ಧೆಗಿಳಿದರು. 1025 ಮಂದಿ ಮತದಾರರಿರುವ ಈ ಸ್ಥಾನದಲ್ಲಿ 637 ಮತ ಚಲಾವಣೆಯಾಗಿದ್ದು, ವಿಷ್ಣುಕುಮಾರ್ 364 ಮತಗಳಿಸಿದ್ದಾರೆ. ಸೂರಜ್ ರೈ 226 ಮತ ಗಳಿಸಿದರೆ, ಮೊಯ್ದೀನ್ ಅವರು 41 ಮತ ಗಳಿಸಿದರು. ಇನ್ನೂ 6 ಮತಗಳು ತಿರಸ್ಕೃತಗೊಂಡಿವೆ.
ಚುನಾವಣಾಧಿಕಾರಿಯಾಗಿ ಮೆಸ್ಕಾಂ ಎಇಇ ಪ್ರವೀಣ್ ಜೋಷಿ, ಸಹಾಯಕ ಚುನಾವಣಾಧಿಕಾರಿ ಪಿಡಿಒ ಅಶೋಕ್ ಎನ್.ಜಿ, ಚುನಾವಣಾ ಉಪ ತಹಸೀಲ್ದಾರ್ ಕೆ. ಸಿದ್ದರಾಜು, ಮತ ಎಣಿಕೆ ಮೇಲ್ವಿಚಾರಕರಾಗಿ ಕೇಂದ್ರ ಸ್ಥಾನೀಯ ಶಿರಸ್ತೇದಾರ್ ಅಣ್ಣು ನಾಯ್ಕ್, ಮತ ಎಣಿಕೆ ಸಹಾಯಕರಾಗಿ ಸೀತಾರಾಮ ಪೂಜಾರಿ ಕಮ್ಮಾಜೆ, ವಿಶುಕುಮಾರ್ ಹಾಗೂ ಚುನಾವಣಾ ಪ್ರಥಮ ದರ್ಜೆ ಸಹಾಯಕರಾದ ರಾಜ್ ಕುಮಾರ್, ಕಾರ್ತಿಕ್ ಹಾಗೂ ಮಾಣಿಲ ಗ್ರಾಮ ಲೆಕ್ಕಾಧಿಕಾರಿ ಶಿವಾನಂದ ನಾಟೇಕರ್ ಚುನಾವಣಾ ಕಛೇರಿ ಸಿಬ್ಬಂದಿಗಳಾದ ಚಂದು, ಕಿರಣ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.