ವಿಟ್ಲ: ಮೆಸ್ಕಾಂ ಇಲಾಖೆಯ ಗ್ರಾಹಕರ ಮೇಲಿನ ದೌರ್ಜನ್ಯ ಹಾಗೂ ಕಾನೂನು ವಿರೋಧಿ ವರ್ತನೆಯ ವಿರುದ್ಧ ವಿಟ್ಲ ಮೆಸ್ಕಾಂ ಕಛೇರಿಯ ಮುಂಭಾಗದಲ್ಲಿ ಡಿ.೧೬ರಂದು ಬೆಳಗ್ಗೆ ೧೧ ಗಂಟೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಸುರೇಶ್ ಭಟ್ ಕೊಜಂಬೆ ಹೇಳಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮಕ್ಕೆ ಗ್ರಾಹಕರ ಬಿಲ್ ಗಳಿಗೆ ಯಾವುದೇ ರೀತಿಯಲ್ಲಿ ಬಡ್ಡಿ ವಿಧಿಸುವ ಹಕ್ಕಿಲ್ಲವಾದರೂ ಪೈನಾನ್ಸ್ ರೀತಿಯಲ್ಲಿ ಬಡ್ಡಿ ವಿಧಿಸಲಾಗುತ್ತಿದೆ. ಬಿಲ್ ಪಾವತಿಸದಿದ್ದರೆ ನೋಟೀಸೂ ನೀಡದೆ ಸಂಪರ್ಕ ಕಡಿತ ಮಾಡಲಾಗುತ್ತಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ನಿಯಮಗಳನ್ನು ಉಲ್ಲಂಘಿಸಿ ಗ್ರಾಹಕರ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ ಎಂದು ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.
ಅಸಮರ್ಪಕ ವಿದ್ಯುತ್ ಪೂರೈಕೆ, ಹೊಸ ಸಂಪರ್ಕಕ್ಕೆ ರೈತರ ಮೇಲೆ ಶೋಷಣೆ, ವಿದ್ಯುತ್ ತೊಂದರೆ ಸರಿಪಡಿಸುವಲ್ಲಿ ವಿಳಂಬ ನೀತಿ ಸೇರಿ ಹಲವು ರೈತರ ಪ್ರಶ್ನೆಗೆ ದಾಖಲೆಗಳ ಸಹಿತವಾಗಿ ಬಹಿರಂಗ ಉತ್ತರವನ್ನು ಪ್ರತಿಭಟನೆಯ ಸಂದರ್ಭ ಅಧಿಕಾರಿಗಳು ನೀಡಬೇಕು. ನೀಡಿದ ಮಾಹಿತಿಯನ್ನು ಜಾರಿಗೆ ತರುವ ಜವಾಬ್ದಾರಿಯುತ ಅಧಿಕಾರಿಗಳು ಬರದೇ ಹೋದಲ್ಲಿ ಮೆಸ್ಕಾಂ ಕಛೇರಿಗೆ ಬೀಗ ಜಡಿದು ಉಗ್ರ ಸ್ವರೂಪದ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಎಲ್ಲಾ ವಿದ್ಯುತ್ ಗ್ರಾಹಕರು ಆಗಮಿಸಿ, ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಡಿ.೧೬ರಂದು ಒಂದು ದಿನದ ಮಟ್ಟಿಗೆ ಗ್ರಾಹಕರು ಮೆಸ್ಕಾಂ ನ ಯಾವುದೇ ಬಿಲ್ ಪಾವತಿ ಮಾಡದೆ ಪ್ರತಿಭಟನೆಗೆ ಸಹಕಾರವನ್ನು ನೀಡಬೇಕೆಂದು ವಿನಂತಿಸಿದರು.
ಕಾಂಗ್ರೆಸ್ ಮುಖಂಡ ಎಂ. ಎಸ್. ಮಹಮ್ಮದ್ ಮಾತನಾಡಿ ಮೆಸ್ಕಾಂ ಎಂಬುದು ಗೊಂದಲದ ಇಲಾಖೆಯಾಗಿದೆ. ಜನರು ಎಚ್ಚರ ವಹಿಸದೆ ಘಾಡ ನಿದ್ದೆಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ರೈತ ಸಂಘ ಮುಂದೆ ಬಂದು ಪ್ರತಿಭಟನೆ ನಡೆಸಲು ಬಂದಿದೆ. ಇದಕ್ಕೆ ಜನರ ಬೆಂಬಲ ನೀಡುವ ಅಗತ್ಯವಿದೆ. ಪಕ್ಷದ ಸಂಪೂರ್ಣ ಬೆಂಬಲ ಇದೆ ಎಂದರು.
ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಭಟ್ ಪಾದೆಕಲ್ಲು ಉಪಸ್ಥಿತರಿದ್ದರು.