ವಿಟ್ಲ: ಇತಿಹಾಸ ಪ್ರಸಿದ್ಧ ವಿಟ್ಲ ಅರಮನೆಯ ಆಡಳಿತಕ್ಕೊಳಪಟ್ಟ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ದೈವ ಶ್ರೀ ಮುಂಡಾಲತ್ತಾಯ ದೈವದ ಮೂಲಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವವು ಡಿ. 31 ಮತ್ತು ಜ.1 ರಂದು ನಡೆಯಲಿದೆ.
ವಿಟ್ಲ ಶ್ರೀ ಪಂಚಲಿಂಗೇಶ್ವರ ಸಾನಿಧ್ಯದ ಸಮೀಪ ದೇವಸ್ಯ ಬೈಲಿನಲ್ಲಿ ದೈವಸ್ಥಾನದ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದ್ದು. ಆಲಂಪಾಡಿ ಬ್ರಹ್ಮಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ. ಡಿ 31 ರಂದು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಶ್ರೀ ದೈವದ ಭಂಡಾರವನ್ನು ಮೂಲಸ್ಥಾನಕ್ಕೆ ತೆಗೆದುಕೊಂಡು ಹೋಗುವ ಕಾರ್ಯ ನಡೆಯಲಿದೆ. ಜ.1ರಂದು ಬೆಳಿಗ್ಗೆ 10 ಗಂಟೆಗೆ ಮುಂಡಾಲತ್ತಾಯ ದೈವದ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನಡೆಯಲಿದ್ದು. ಮಧ್ಯಾಹ್ನ ದೈವದ ನೇಮೋತ್ಸವ ನೆರವೇರಲಿದೆ.
ವಿಟ್ಲ ಜಾತ್ರೋತ್ಸವ ಧ್ವಜಾರೋಹಣ ದಿನದಂದು ಸಂಜೆ ಮೂಲಸ್ಥಾನದಿಂದ ದೈವದ ಭಂಡಾರವು ದೇವಸ್ಥಾನಕ್ಕೆ ಆಗಮಿಸುತ್ತದೆ. ಜಾತ್ರಾ ಸಂದರ್ಭದಲ್ಲಿ ಮಹಾರಥೋತ್ಸವ ಮತ್ತು ಅವಭೃತ ಸ್ನಾನದಂದು ದೇವರೊಂದಿಗೆ ದೈವದ ಸವಾರಿ ನಡೆಯುತ್ತದೆ. ಧ್ವಜಾವರೋಹಣ ಗೊಂಡು ಮೊದಲ ನೇಮೋತ್ಸವ ದೇವರ ಸಾನಿಧ್ಯದಲ್ಲಿ ನಡೆದು ದೈವದ ಭಂಡಾರವು ಮೂಲಸ್ಥಾನವನ್ನು ತಲುಪುತ್ತದೆ. ನ.13 ರಂದು ಆರಂಭಗೊಂಡು 48 ದಿನಗಳ ಅವಧಿಯಲ್ಲಿ ಪೂರ್ಣಗೊಂಡು ದೈವದ ಮೂಲಸ್ಥಾನ ದೈವಕ್ಕೆ ಸಮರ್ಪಣೆಯಾಗಲಿದೆ.