ವಿಟ್ಲ: ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಗೂಡ್ಸ್ ವಾಹನದಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದಾಗ ಸ್ಥಳೀಯರು ಪತ್ತೆ ಹಚ್ಚಿ ಪೊಲೀಸರಿಗೊಪ್ಪಿಸಿದ ಘಟನೆ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಮುಳಿಯದಲ್ಲಿ ನಡೆದಿತ್ತು. ಈ ಪ್ರಕರಣದ ನಾಲ್ವರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಂಜೇಶ್ವರ ಬಾಕ್ರಬೈಲು ನಿವಾಸಿ ಇಬ್ರಾಹಿಂ ಯಾನೆ ಮೋನು, ಮಂಜೇಶ್ವರ ಬಾಕ್ರಬೈಲು ನಿವಾಸಿ ಮೂಸಾ, ಕನ್ಯಾನ ಗ್ರಾಮದ ನಿವಾಸಿ ಹಮೀದ್ ಯಾನೆ ಜಲಾಲ್ ಹಾಗೂ ಸಾಲೆತ್ತೂರಿನ ಹಮೀದ್ ಎನ್ನಲಾಗಿದೆ.
ಘಟನೆ ವಿವರ:
ಪಾತೂರು ಗ್ರಾಮದ ಮಂಜೇಶ್ವರ ನಿವಾಸಿ ಮೂಸಾ ಎಂಬವರು ಮೂವರ ಜೊತೆ ಗೂಡ್ಸ್ ವಾಹನದಲ್ಲಿ ಮುಳಿಯ ಎಂಬಲ್ಲಿಂದ 5 ಜಾನುವಾರುಗಳನ್ನು ಖರೀದಿ ಮಾಡಿಕೊಂಡು ಗೂಡ್ಸ್ ವಾಹನದಲ್ಲಿ ಕಜೆ ಎಂಬಲ್ಲಿಗೆ ಸಾಗಾಟ ಮಾಡುತ್ತಿದ್ದ ಸಂದರ್ಭ ಅಳಿಕೆ ಗ್ರಾಮದ ಮುಳಿಯ ಎಂಬಲ್ಲಿ ಜಯ ಪ್ರಶಾಂತ ಲಕ್ಷ್ಮೀಶ ಹಾಗೂ ಇತರ ಮೂರು ಮೋಟಾರು ಸೈಕಲ್ ಮತ್ತು ಒಂದು ಕಾರನ್ನು ರಸ್ತೆಗೆ ಅಡ್ಡವಾಗಿಟ್ಟು ಗೋ ಸಾಗಾಟದ ವಾಹನವನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದರು.
ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು, 5 ಜಾನುವಾರುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆದುಕೊಂಡು, ಅಕ್ರಮ ಗೋ ಸಾಗಾಟದ ಆರೋಪಿಗಳಾದ ಇಬ್ರಾಹಿಂ ಯಾನೆ ಮೋನು, ಮೂಸಾ, ಹಮೀದ್ ಯಾನೆ ಜಲಾಲ್, ಹಮೀದ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.