ವಿಟ್ಲ: ಸಮರ್ಪಕ ರಸ್ತೆ ವ್ಯವಸ್ಥೆ ಕಲ್ಪಿಸದ ಹಾಗೂ ಸರ್ಕಾರಿ ರಸ್ತೆ ಅತಿಕ್ರಮಣ ಮೊದಲಾದ ಸಮಸ್ಯೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕಾರಿಸಲಾಗಿದೆ ಎಂದು ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ತಿಳಿಸಿದರು.
ಅವರು ವಿಟ್ಲದ ಪ್ರೆಸ್ ಕ್ಲಬ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕುಳ ಗ್ರಾಮದ ಅಡ್ಯಾಲು ಎಂಬಲ್ಲಿ ಬಿಲ್ಲವರ ೧೦ ಮನೆಗಳಿದ್ದು, ೫೦ ವರ್ಷಗಳಿಂದ ರಸ್ತೆ ಇಲ್ಲದೇ ಪರದಾಡುತ್ತಿದ್ದಾರೆ ಈ ಬಗ್ಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮಾಣಿಲ ಗ್ರಾಮದ ಕನ್ನಡಗುಳಿ ಕುಟೇಲು ಎಂಬಲ್ಲಿಗೆ ಹೋಗುವ ಸಾರ್ವಜನಿಕ ರಸ್ತೆಗೆ ಖಾಸಗಿ ವ್ಯಕ್ತಿ ಅಡ್ಡಿಪಡಿಸುತ್ತಿದ್ದು, ಅವರ ಮೇಲೆ ಪ್ರಕರಣ ದಾಖಲಿಸದೇ ಜಾಗವನ್ನು ತೆರವುಗೊಳಿಸಿಲ್ಲ.
ಬಂಟ್ವಾಳ ತಾಲೂಕಿನ ಪಜೀರು ಗ್ರಾಮದಲ್ಲಿ ಸಾರ್ವಜನಿಕ ರಸ್ತೆಗೆ ಪ. ಜಾತಿ ಅನುದಾನದ ಮೂಲಕ ಕಾಂಕ್ರೀಟಿಕರಣಗೊಂಡಿದ್ದರೂ ಈ ರಸ್ತೆಯಲ್ಲಿ ಸಾರ್ವಜನಿಕರು ತೆರಳಲು ಅಡ್ಡಿಪಡಿಸಲಾಗುತ್ತಿದ್ದು, ಈ ಬಗ್ಗೆ ತಹಶೀಲ್ದಾರರು ತೆರವುಗೊಳಿಸುವಂತೆ ಆದೇಶ ನೀಡಿದ್ದರೂ ಇದುವರೆಗೂ ತೆರವುಗೊಳಿಸಿಲ್ಲ. ಅದೇ ರೀತಿ ಕೇಪು ಗ್ರಾಮದ ಅಜ್ಜಿನಡ್ಕ ಎಂಬಲ್ಲಿಯ ಪ.ಜಾತಿ ಕಾಲನಿಗೆ ರಸ್ತೆ ನಿರ್ಮಿಸಲು ಹಲವಾರು ವರ್ಷಗಳಿಂದ ಬೇಡಿಕೆ ಸಲ್ಲಿಸಿದ್ದರೂ ಖಾಸಗಿ ಜಮೀನು ಎಂದು ರಸ್ತೆ ನಿರ್ಮಿಸಿಲ್ಲ. ಈ ಮೇಲಿನ ಎಲ್ಲಾ ಸಮಸ್ಯೆಗಳನ್ನು ಮನಗಂಡು ನಾಲ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಂದೆ ನಡೆಯುವ ಗ್ರಾ.ಪಂ ಚುನಾವಣೆಯನ್ನು ಚುನಾವಣೆಯನ್ನು ಬಹಿಷ್ಕಾರಿಸಲು ತೀರ್ಮಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮಸ್ಥರಾದ ಉಮನಾಥ ಪಜೀರು, ಆನಂದ ಎಸ್ ಕಬಕ, ಗಣೇಶ್ ಕನ್ನಡಗುಳಿ, ವಿಶ್ವನಾಥ ಕುಟೇಲು, ಆಶಿತ್ ಯಸ್ ಅಡ್ಯಾಲು, ಚಂದ್ರಶೇಖರ ಯು, ಪ್ರಸಾದ್ ಅನಂತಾಡಿ ಉಪಸ್ಥಿತರಿದ್ದರು.