ವಿಟ್ಲ: ಮಹಿಳೆಯೋರ್ವರು ಗುಡ್ಡದಿಂದ ದನಕ್ಕೆ ಸೊಪ್ಪು ತರುತ್ತಿದ್ದ ವೇಳೆ ಆಕೆಯ ಮೈದುನ ಕೈ ಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿದ ಘಟನೆ ನಡೆದಿದೆ. ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವೀರಕಂಬ ಎಂಬಲ್ಲಿ ಘಟನೆ ನಡೆದಿದೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ವೀರಕಂಬ ಮೈರ ನಿವಾಸಿ ಜನಾರ್ದನ ವಿರುದ್ಧ ಪ್ರಕರಣ ದಾಖಲಾಗಿದೆಖಲಾಗಿದೆ.
ಆರೋಪಿಯು ಮಹಿಳೆಯ ಗಂಡನ ದೊಡ್ಡಪ್ಪನ ಮಗನಾಗಿದ್ದು, ಮಹಿಳೆಯ ಮನೆಯ ಹತ್ತಿರದಲ್ಲೇ ಅವನ ಸಂಸಾರದೊಂದಿಗೆ ವಾಸವಾಗಿದ್ದ. ಫೆ.25 ರಂದು ಬೆಳಗ್ಗೆ ಮಹಿಳೆಯ ಗಂಡ ದನದ ಕೊಟ್ಟಿಗೆಗೆ ಸೊಪ್ಪು ತರಲು ಗುಡ್ಡಕ್ಕೆ ಹೋಗಿದ್ದು, ಮಹಿಳೆ ಮನೆ ಕೆಲಸ ಮುಗಿಸಿ ಗುಡ್ಡಕ್ಕೆ ಹೋಗಿ, ಗಂಡ ಕತ್ತರಿಸಿದ್ದ ಸೊಪ್ಪನ್ನು ತರುತ್ತಿದ್ದ ವೇಳೆ ಗುಡ್ಡದಲ್ಲಿ ಅಡ್ಡಗಟ್ಟಿದ ಜನಾರ್ಧನ ಕೈ ಹಿಡಿದು ಎಳೆದು, ಒಂದು ಕೈಯಿಂದ ಬಾಯಿಯನ್ನು ಮುಚ್ಚಿ ಮಾನಭಂಗ ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಹಿಳೆ ಆತನಿಂದ ಬಿಡಿಸಿಕೊಂಡು ಗಂಡನನ್ನು ಕರೆದಾಗ, ಮಹಿಳೆಯ ಗಂಡ ಮತ್ತು ಇತರರು ಬರುವುದನ್ನು ನೋಡಿ ನೀನು ನನಗೆ ಸಿಗದಿದ್ದರೆ ನಿನ್ನನ್ನು ಮುಂದೆ ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.