ವಿಟ್ಲ: ಪ್ರತಿ ಗ್ರಾಮ ಪಂಚಾಯತ್ ನಲ್ಲಿ ತಮ್ಮ ವ್ಯಾಪ್ತಿಯ ರಸ್ತೆ, ದಾರಿಗಳ ಬಗ್ಗೆ ಸ್ಪಷ್ಟ ದಾಖಲೆಗಳಿರಬೇಕು. ಈಗ ಹೊಸದಾಗಿ ಮನೆ ಅಥವಾ ಕಟ್ಟಡ ಕಟ್ಟುವುದಾದರೆ ಅವರಿಗೆ ಪರವಾನಿಗೆ ನೀಡುವಾಗ ರಸ್ತೆ ಮಾರ್ಜಿನ್ ಬಿಟ್ಟು ಕಟ್ಟಡವನ್ನು ಕಟ್ಟುವಂತೆ ತಿಳಿಸಿ ಹಾಗೂ ಕಟ್ಟಡ ಕಟ್ಟಿದ ಬಳಿಕ ಅವರು ರಸ್ತೆ ಮಾರ್ಜೀನ್ ಬಿಟ್ಟು ಕಟ್ಟಿದ್ದಾರೆಯೇ ಎಂದು ಪರಿಶೀಲನೆ ನಡೆಸಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ವಿಟ್ಲದ ಅತಿಥಿಗೃಹದಲ್ಲಿ ನಡೆದ ಗ್ರಾಮ ಪಂಚಾಯತ್ ವ್ಯಾಪ್ತಿಯ ವಸತಿ ಯೋಜನೆ ಫಲಾನುಭವಿಗಳ ಆಯ್ಕೆ ಕುರಿತು ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
ಪ್ರತಿ ಗ್ರಾ.ಪಂನಲ್ಲಿ ಇರುವ ಸರಕಾರಿ ಜಾಗಗಳನ್ನು ಗುರುತಿಸಿ, ಅದರಲ್ಲಿ ಮುಂದಿನ ೨೫ವರ್ಷಗಳಿಗೆ ಬೇಕಾಗುವ ಜಾಗಗಳನ್ನು ಪಂಚಾಯತ್ ಹೆಸರಿನಲ್ಲಿ ಕಾಯ್ದಿರಿಸುವ ಪ್ರಕ್ರೀಯೆ ಪ್ರತಿಯೊಂದು ಗ್ರಾ.ಪಂ ನಿಂದ ಆಗಬೇಕಾಗಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಸತಿ ರಹಿತರಿಗೆ ನಾವು ಜಾಗವನ್ನು ಪರ್ಚೇಸ್ ಮಾಡಿ ಕೊಡಬೇಕಾದ ಪರಿಸ್ಥಿತಿ ಬರಬಹುದು. ಆದ್ದರಿಂದ ಈಗಲೇ ನಾವು ಎಚ್ಚೆತ್ತುಕೊಂಡು ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮುಂಚಿತವಾಗಿಯೇ ಮಾಡಬೇಕು ಎಂದು ಹಾಗೆಯೆ ಮನೆ ಹಾಗೂ ಕಟ್ಟಡ ಕಟ್ಟುವಾಗ ಅವರು ಪರವಾನಿಗೆ ಪಡೆದಿರುವಷ್ಟೆ ಸ್ಕ್ವಾರ್ ಫೀಟ್ ನಲ್ಲಿ ಮನೆ ಕಟ್ಟಿದ್ದಾರೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಯಾವುದೇ ಅಧಿಕಾರಿಗಳು ಕಣ್ಣುಮುಚ್ಚಿಕೊಂಡು ಕೆಲಸ ಮಾಡಬೇಡಿ. ನಿಯಮ ಪಾಲನೆ ಮಾಡದೆ ಕಟ್ಟಡ ಕಟ್ಟುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ.
ಆದರೆ ಯಾವೊಬ್ಬರಿಗೂ ತೊಂದರೆ ಮಾಡಬೇಡಿ. ಕಾನೂನಿನಲ್ಲಿ ಅವಕಾಶವಿದ್ದರೆ ಅವೆಲ್ಲವನ್ನು ಸರಿಪಡಿಸಿಕೊಂಡು ಹೋಗಿ. ಕಟ್ಟಡ ಕಟ್ಟುವಾಗ ರಸ್ತೆ ಮಾರ್ಜಿಮ್ ಬಿಟ್ಟು ಕಟ್ಟಡವನ್ನು ಕಟ್ಟಿದ್ದಾರೆಯೇ ಎಂಬುದನ್ನು ಅಧಿಕಾರಿಗಳು ದೃಡಪಡಿಸಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ರಸ್ತೆ ಅಗಲೀಕರಣ ಗೊಳಿಸುವಾಗ ಜಾಗ ಒತ್ತುವರಿ ಮಾಡಿಕೊಳ್ಳಲು ಹಣಕೊಡುವ ಪರಿಸ್ಥಿತಿ ಎದುರಾಗಬಹುದು ಎಂದರು.
ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ, ಪುಣಚ ಮಹಾಶಕ್ತಿಕೇಂದ್ರದ ಅಧ್ಯಕ್ಷರಾದ ಹರಿ ಪ್ರಸಾದ್, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಅರುಣ್ ವಿಟ್ಲ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.