


ವಿಟ್ಲ: ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿರುವ ನೌರತ್ತುಲ್ ಮದೀನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿರುವ ಮಗುವಿಗೆ ಅಮಾನುಷವಾಗಿ ಬೆತ್ತದಿಂದ ಗಂಭೀರವಾಗಿ ಹಲ್ಲೆ ನಡೆಸಿದ ಶಾಲಾ ಶಿಕ್ಷಕ ಇಸ್ತಿಕಾರ್ ಎಂಬವರ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವಿಗೆ ನ್ಯಾಯ ದೊರಕಿಸಿಕೊಡುವಂತೆ ಮಗುವಿನ ಹೆತ್ತವರು ಠಾಣೆಯ ಮೆಟ್ಟಿಲೇರಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಮುಖ್ಯ ಶಿಕ್ಷಕ ಇಸ್ತಿಕಾರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಶಿಕ್ಷಕನ ಮೃಗೀಯ ಹಲ್ಲೆಯಿಂದ ಮಗು ಈಗಲೂ ಭಯ ಭೀತಳಾಗಿ, ಶಾಲೆಗೆ ಹೋಗಲು ಆತಂಕ ಪಡುತ್ತಿದ್ದಾಳೆ. ಶಾಲೆ ಮಕ್ಕಳಿಗೆ ಶಿಕ್ಷಣ ಸುರಕ್ಷತೆ ಮತ್ತು ಶಿಸ್ತನ್ನು ಕಲಿಸಬೇಕಾದ ಸ್ಥಳವಾಗಿದ್ದು ಶಿಕ್ಷಕರಿಂದಲೇ ಹಿಂಸಾತ್ಮಕ ವರ್ತನೆ ನಡೆಯುವುದು ಅತ್ಯಂತ ಖಂಡನೀಯ ಮತ್ತು ಕಾನೂನು ಬಾಹಿರವಾಗಿದೆ. ಆದ್ದರಿಂದ ಉದ್ದೇಶಪೂರ್ವಕವಾಗಿ ಯಾವುದೇ ಸಕಾರಣವಿಲ್ಲದೆ ನನ್ನ ಮಗುವಿನ ಕೈಗೆ ಗಂಭೀರವಾಗಿ ಬೆತ್ತದಿಂದ ಹೊಡೆದಂತ ನೌರತ್ತುಲ್ ಮದೀನಾ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ಇಸ್ತಿಕಾರ್ ಎಂಬವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ನೀಡಿ ವಿನಂತಿಸಿಕೊಂಡಿದ್ದಾರೆ.
ಮಗು ಎಂದಿನಂತೆ ಶಾಲೆಗೆ ಹೋಗಿದ್ದು ಆ ಸಂದರ್ಭದಲ್ಲಿ ಶಾಲೆಯಿಂದ ಒಂದು ಕರೆ ಬಂದಿರುತ್ತದೆ ಮಧ್ಯಾಹ್ನ ಸುಮಾರು 2 ಗಂಟೆಗೆ ನಿಮ್ಮ ಮಗಳು ನಮಾಜ್ ಮಾಡುವ ಕೊಠಡಿಯಲ್ಲಿ ಇತರೆ ಮಕ್ಕಳಿಗೆ ತೊಂದರೆ ಮಾಡುತ್ತಿದ್ದಾಳೆ ಹಾಗೂ ಈ ವಿಚಾರವಾಗಿ ಬೈದಾಗ ಹಾಗೂ ಅವಳು ಅಲ್ಲಿಯೇ ಮೂತ್ರ ಮಾಡಿಕೊಂಡಿರುತ್ತಾಳೆ ಮತ್ತು ನೀವು ಬಂದು ಮಗುವನ್ನು ಕರೆದುಕೊಂಡು ಹೋಗಿ ಎಂದು ಶಾಲೆಯ ಕಚೇರಿಯಿಂದ ಕರೆ ಬಂದಾಗ ಆ ಸಮಯ ಮನೆಯಲ್ಲಿ ಯಾರೂ ಇರದ ಕಾರಣ ಮಗುವನ್ನು ನೀವೇ ಆಟೋದಲ್ಲಿ ಕಳಿಸಿ ಎಂದು ಹೆತ್ತವರು ತಿಳಿಸಿದ್ದಾರೆ.
ಮನೆಗೆ ಬಂದ ಮಗಳು ಶಾಲೆಯಲ್ಲಿ ಮಧ್ಯಾಹ್ನ ಸುಮಾರು 2 ಗಂಟೆಗೆ ಪಾಠ ಮಾಡುವ ಅಧ್ಯಾಪಕರಾದ ಇಸ್ತಿಕಾರ್ ಎಂಬವರು ನನಗೆ ಕೈಗೆ ಬೆತ್ತದಿಂದ ಬಲವಾಗಿ ಗಂಭೀರವಾಗಿ ಹಲ್ಲೆ ಮಾಡಿದ್ದು ಹಲ್ಲೆ ಮಾಡುವ ಸಂದರ್ಭ ನಾನು ಹೆದರಿ ಮೂತ್ರ ಮಾಡಿಕೊಂಡಿರುತ್ತೇನೆ ಎಂದು ಹೇಳಿದ ಮಗುವಿನ ಹೇಳಿಕೆ ಪ್ರಕಾರ ಹೆತ್ತವರು ಶಾಲೆಯ ಶಿಕ್ಷಕ ಇಸ್ತಿಕಾರನಿಗೆ ಕರೆ ಮಾಡಿದಾಗ ನಾನು ಹಲ್ಲೆ ನಡೆಸಿದ್ದು ಸರಿ ಎಂಬಂತೆ ಅವರು ಉಡಾಫೆ ಉತ್ತರವನ್ನು ನೀಡಿದ್ದು, ಹೆತ್ತವರಿಗೂ ಮಗಳನ್ನು ಮತ್ತೆ ಶಾಲೆಗೆ ಕಳಿಸಲು ಭಯವಾಗಿದೆ. ಮಗಳ ಶೈಕ್ಷಣಿಕ ಮುಂದುವರಿಕೆಯ ಬಗ್ಗೆ ಅವಳಿಗೆ ಸೂಕ್ತ ನ್ಯಾಯ ಒದಗಿಸುವಂತೆ ಮತ್ತು ವಿನಾಃ ಕಾರಣ ಗಂಭೀರವಾಗಿ ಹಲ್ಲೆ ನಡೆಸಿದ ಮುಖ್ಯ ಶಿಕ್ಷಕನ ವಿರುದ್ಧ ಪೊಲೀಸರು, ಮತ್ತು ಶಿಶು ಅಭಿವೃದ್ಧಿ ಯೋಜನಾ ಕಛೇರಿಗೂ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿದ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








