ವಿಟ್ಲ : ಸುಮಾರು 15 ವರ್ಷಗಳ ಹಿಂದೆ ಕೊಳ್ನಾಡು ಗ್ರಾಮದ ಮಂಚಿ ಬಸ್ಸು ತಂಗುದಾಣದ ಬಳಿಯಲ್ಲಿ ಪರಿಶಿಷ್ಟ ವರ್ಗದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನ ವಿಟ್ಲ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಆರೋಪಿಯನ್ನು ಕೊಳ್ನಾಡು ಗ್ರಾಮದ ಕೋಕಲ ನಿವಾಸಿ ಅಬ್ಧುಲ್ ಕುಂಞಯವರ ಮಗ ಮಹಮ್ಮದ್ ಫಾರೂಕ್ ಎನ್ನಲಾಗಿದೆ.
ವಿಟ್ಲ ಠಾಣಾ ಇನ್ಸಪೆಕ್ಟರ್ ನಾಗರಾಜ್. ಎಚ್ ಇ ಅವರ ಮಾರ್ಗದರ್ಶನದಲ್ಲಿ ವಿಟ್ಲ ಪೊಲೀಸರಾದ ಜಯಕುಮಾರ್ ಹಾಗೂ ಹೇಮರಾಜ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
15 ವರ್ಷಗಳ ಹಿಂದೆ ದೇವಪ್ಪ ನಾಯ್ಕ ಎಂಬವರು ಮಂಚಿ ಕೊಲ್ನಾಡು ಬಸ್ಸು ನಿಲ್ದಾಣದ ಹತ್ತಿರಕ್ಕೆ ಬಂದಾಗ ಅಲ್ಲಿದ್ದ ಆರೋಪಿ ಫಾರೂಕ್ ಇವರನ್ನು ತಡೆದು ನಿಲ್ಲಿಸಿ ಕೈಗಳಿಂದ ದೂಡಿ ಹಾಕಿ ಕಾಲಿನಿಂದ ತುಳಿದು ಹಲ್ಲೆಮಾಡಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಬದುಕಲು ಬಿಡುವುದಿಲ್ಲ ಎಂದು ಜೀವಬೆದರಿಕೆ ಒಡ್ಡಿರುವುದಾಗಿ ಪ್ರಕರಣ ದಾಖಲಾಗಿತ್ತು. ದೇವಪ್ಪ ನಾಯ್ಕ ಅವರ ತಮ್ಮನಿಗೆ ಒಂದು ವರ್ಷದ ಹಿಂದೆ ಕೊಟ್ಟ ಹಣದ ವಿಚಾರದಲ್ಲಿ ಈ ಕೃತ್ಯ ನಡೆದಿರುವುದಾಗಿದೆ ಪ್ರಕರಣದಲ್ಲಿ ತಿಳಿಸಲಾಗಿತ್ತು.
ಈತನು ಹಲವರು ವರ್ಷಗಳಿಂದ ಅಂತರಾಜ್ಯಗಳಲ್ಲಿ ತಲೆ ಮರೆಸಿಕೊಂಡಿದ್ದು, ಇದೀಗಾ 15 ವರ್ಷಗಳ ಬಳಿಕ ಈತನನ್ನು ವಿಟ್ಲ ಪೊಲೀಸರು ಕೇರಳದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.