ವಿಟ್ಲ : ಕಮರ್ಷಿಯಲ್ ಗ್ಯಾಸ್ ಅನ್ನು ಅಂಗಡಿಗಳಿಗೆ ಕೊಂಡೊಯ್ಯುತ್ತಿದ್ದ ವೇಳೆ ಮೇಗಿನಪೇಟೆಯ ಚಿಕನ್ ಸೆಂಟರ್ ಮಾಲಕನೋರ್ವ ಗ್ಯಾಸ್ ಸಪ್ಲೈ ವಿಚಾರಕ್ಕೆ ಸಂಬಂಧಿಸಿ ಮಾತಿಗಿಳಿದು ಅವಾಚ್ಯ ಶಬ್ದಗಳಿಂದ ಬೈದು, ನಿಂದಿಸಿ ತಂಡದೊಂದಿಗೆ ಹಲ್ಲೆ ನಡೆಸಿದ್ದಾರೆ ಆರೋಪಿಸಿ ಗ್ಯಾಸ್ ಏಜೆನ್ಸಿಯ ಸಿಬ್ಬಂದಿ ಸದಾನಂದರವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕನ್ ಸೆಂಟರ್ ಮಾಲಕ ಅಬ್ದುಲ್ ಸಮದ್ ರವರು ದೂರು ನೀಡಿದ್ದು, ನಮ್ಮ ಅಂಗಡಿಗೆ ಇಂಡಿಯನ್ ಗ್ಯಾಸ್ ಸಂಸ್ಥೆಯಲ್ಲಿ ಕಳೆದ ಒಂದು ವಾರದ ಹಿಂದೆ ಅನಿಲ ಪೂರೈಕೆ ಮಾಡಲು ತಿಳಿಸಿದ್ದು, ಪೂರೈಕೆ ಮಾಡಿರುವುದಿಲ್ಲ. ಈ ಬಗ್ಗೆ ಫೋನ್ ಮಾಡಿ ವಿಚಾರಿಸಿದಾಗ ಅದರ ಸಿಬ್ಬಂದಿ ಉಡಾಫೆಯಿಂದ ಮಾತನಾಡಿ, ನಿಂದಿಸಿರುತ್ತಾರೆ. ಮೆ.15 ರಂದು ಬೆಳಿಗ್ಗೆ ಚಾಲಕ ಏಕಾಏಕಿ ಪಿಕಪ್ ವಾಹನವನ್ನು ಅಂಗಡಿ ಜಗಳಿಗೆ ನುಗ್ಗಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ಸಮದ್ ರವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ದೂರು ನೀಡಿದ ವೇಳೆ ಅಬ್ದುಲ್ ಸಮದ್ ರವರು ಘಟನೆ ವೇಳೆ ತಮ್ಮಗಡಿಯಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿಯ ಫೂಟೇಜ್ ಅನ್ನು ಪೊಲೀಸರಿಗೆ ನೀಡಿದ್ದಾರೆ. ಇತ್ತಂಡಗಳವರು ನೀಡಿದ ದೂರನ್ನು ಸ್ವೀಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.