ವಿಟ್ಲ: ಮಕ್ಕಳ ಮನಸ್ಸಿನಲ್ಲಿ ಮೂಡಿ ಬರುವ ಕಥೆ, ಕವನಗಳಿಗೆ ಉತ್ತಮ ವೇದಿಕೆಯನ್ನು ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ನೀಡುತ್ತಿದೆ. ಮಕ್ಕಳ ಮನ ಸೆಳೆಯುವ ಸಾಹಿತ್ಯ ಬೆಳೆಯ ಬೇಕು ಎಂದು ಚಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕಿ ಶ್ರೇಯಾ ಹೇಳಿದರು. ಅವರು ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಇವರ ವತಿಯಿಂದ ಶಾಲೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಜರಗಿದ ಒಂದು ದಿನದ ಸಾಹಿತ್ಯ ಸ್ವರಚನೆ ಪ್ರೇರಣಾ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.
ಕಂಬಳಬೆಟ್ಟು ಮತ್ತು ವಿಟ್ಲ ಸಮೂಹ ಸಂಪನ್ಮೂಲ ಕೇಂದ್ರಗಳ ಸಾಹಿತ್ಯಾಸಕ್ತ ಆಯ್ದ ಶಿಕ್ಷಕರು ಮತ್ತು ಚಂದಳಿಕೆ ಶಾಲಾ ಆಯ್ದ ವಿದ್ಯಾರ್ಥಿಗಳು ಪ್ರೇರಣಾ ಕಾರ್ಯಾಗಾರದಲ್ಲಿ ಭಾಗವಹಿಸಿದರು. ವಿಟ್ಲ ಕ್ಲಸ್ಟರ್ ಸಿ.ಆರ್.ಪಿ. ಬಿಂದು ಶುಭ ಕೋರಿದರು. ಅಪರಾಹ್ನ ಸಮಾರೋಪದಲ್ಲಿ ಚಂದಳಿಕೆ ಶಾಲಾ ಮುಖ್ಯೋಪಾಧ್ಯಾಯ ವಿಶ್ವನಾಥ ಗೌಡ ಬಿ. ಕುಳಾಲು, ಕಮ್ಮಟದಲ್ಲಿ ಭಾಗವಹಿಸಿದವರಿಂದ ರಚಿತವಾದ ಹಸ್ತ ಪತ್ರಿಕೆ “ಚಂದಳಿಕೆ ಚುಕ್ಕಿ”ಯನ್ನು ಬಿಡುಗಡೆಗೊಳಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ರೇಣುಕಾ, ನಿರಂಜನ್, ಶಿವ ಪ್ರಸಾದ್ ಮತ್ತು ರಾಮಚಂದ್ರ ನಾಯ್ಕ್ ಅನಿಸಿಕೆ ಹೇಳಿದರು.
ಮಕ್ಕಳ ಕಲಾ ಲೋಕದ ಗೌರವ ಸಲಹೆಗಾರ ಭಾಸ್ಕರ ಅಡ್ವಳ ಮತ್ತು ಅಧ್ಯಕ್ಷ ರಮೇಶ ಎಂ. ಬಾಯಾರು ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದರು. ವಿಶ್ವನಾಥ ಗೌಡ ಸ್ವಾಗತಿಸಿದರು, ಮಕ್ಕಳ ಕಲಾ ಲೋಕದ ಕಾರ್ಯದರ್ಶಿ ಪುಷ್ಪಾ ಎಚ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸುರೇಶ ಶೆಟ್ಟಿ ನಿರೂಪಿಸಿದರು.