ಬಂಟ್ವಾಳದಿ0ದ ಶಬರಿಮಲೆಗೆ ಪಾದಯಾತ್ರೆ ಹೊರಟ ಅಯ್ಯಪ್ಪ ಸ್ವಾಮಿ ವೃತಾಧಾರಿಗಳ ತಂಡಕ್ಕೆ ದಾರಿ ಮಧ್ಯೆ ಸಿಕ್ಕಿ ಶ್ವಾನವೊಂದು ಅವರ ಜತೆಗೆ ಕಿಲೋಮೀಟರ್ಗಟ್ಟಲೆ ಹೆಜ್ಜೆ ಹಾಕಿ, ಅವರು ವಾಸ್ತವ್ಯ ಹೂಡಿದ ಸ್ಥಳದಲ್ಲೇ ನಿಂತು, ಅವರು ಕೊಟ್ಟ ತಿಂಡಿ ತಿನಸುಗಳನ್ನು ತಿಂದು, ಅವರ ತಂಡಕ್ಕೆ ಜೊತೆಯಾದ ವಿಶೇಷ ಸನ್ನಿವೇಶ ನಡೆದಿದೆ.
ಬಂಟ್ವಾಳದ ಮಣಿನಾಲ್ಕೂರು ಗ್ರಾಮದ ಬಡೆಕೊಟ್ಟಿನಿಂದ ಅಯ್ಯಪ್ಪ ಸ್ವಾಮಿ ವೃತಾಧಾರಿಗಳ ತಂಡ ಪಾದಯಾತ್ರೆಯ ಮೂಲಕ ಶಬರಿಮಲೆಗೆ ಹೊರಟಿತ್ತು. ತಂಡವು ಎಟ್ಟುಮಾನುರ್ ತಲುಪಿದ ಸಂದರ್ಭದಲ್ಲಿ ಅವರ ಜತೆ ಶ್ವಾನವೊಂದು ಹೆಜ್ಜೆ ಹಾಕುವುದನ್ನು ಕಂಡರು. ಬಳಿಕ ಅವರು ಅದಕ್ಕೆ ತಿಂಡಿ ಹಾಕಲು ಆರಂಭಿಸಿದ್ದು, ಅಂದಿನಿ0ದ ನಿರಂತರವಾಗಿ ಹಲವು ದಿನಗಳ ಕಾಲ ಆ ತಂಡದ ಜತೆಗೆ ಶ್ವಾನ ಹೆಜ್ಜೆ ಹಾಕಿದ್ದು, ಬೆಳಗ್ಗೆ ಇವರ ಜತೆಗೆ ಹೆಜ್ಜೆ ಹಾಕುವ ಶ್ವಾನವು ಮುಂದೆ ಹೋಗಿ ನಿಂತು ಇವರು ಬರುವುದನ್ನೇ ಕಾಯುತ್ತದೆ. ಇವರ ತಂಡ ಹತ್ತಿರಕ್ಕೆ ಬಂದ ಬಳಿಕ ಮತ್ತೆ ಮುಂದೆ ಸಾಗುತ್ತದೆ ಎಂದು ವೃತಾಧಾರಿಗಳು ವಿವರಿಸುತ್ತಾರೆ.
ಜ. ೩ರಂದು ಅಯ್ಯಪ್ಪ ವೃತಾಧಾರಿಗಳ ತಂಡ ಪಂಪೆಗೆ ತಲುಪಿದ್ದು, ಸ್ವಾಮಿಯ ಸನ್ನಿಧಿಗೆ ತೆರಳಿದ್ದಾರೆ. ತಂಡದ ಚೇತನ್ ಗುರುಸ್ವಾಮಿಯವರು ಅದನ್ನು ತಮ್ಮ ಊರಿಗೆ ಕರೆದುಕೊಂಡು ಬರುವುದಾಗಿ ನಿರ್ಧರಿಸಿ, ಹೀಗಾಗಿ ಶ್ವಾನವನ್ನು ಅಲ್ಲಿನ ಹೋಟೆಲೊಂದರ ಬಳಿ ಕಟ್ಟಿ ಹಾಕಿ, ನಾವು ಸನ್ನಿಧಿಗೆ ಹೋಗಿ ಹಿಂತಿರುವವರೆಗೆ ನೋಡಿಕೊಳ್ಳಿ, ಸ್ಥಳದ ಬಾಡಿಗೆಯನ್ನೂ ಕೊಡುತ್ತೇವೆ ಎಂದು ಹೋಟೆಲ್ನವರನ್ನು ವಿನಂತಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೀದಿ ನಾಯಿಯೊಂದು ಅಯ್ಯಪ್ಪ ಮಾಲಾಧಾರಿಗಳ ಜತೆ ಸೇರಿಕೊಂಡು ೧೭ ದಿನಗಳ ಕಾಲ ಸುಮಾರು ೭೦೦ ಕಿ.ಮೀ ನಡೆದು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಮರಳಿದ ಘಟನೆ ೨೦೧೬ರಲ್ಲಿ ನಡೆದಿತ್ತು. ಹೌದು. ಕೇರಳದ ವಿದ್ಯುತ್ ನಿಗಮದ ಉದ್ಯೋಗಿಯಾದ ನವೀನ್ ಅವರು ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನದಿಂದ ಶಬರಿಮಲೆಗೆ ಕಾಲ್ನಡಿಗೆ ಯಾತ್ರೆ ಆರಂಭಿಸಿದ್ರು, ಈ ನಾಯಿ ನವೀನ್ ರನ್ನು ಬೆಂಬಿಡದೆ ಹಿಂಬಾಲಿಸಿ ಕ್ಷೇತ್ರ ದರ್ಶನ ಮಾಡಿ ಹಿಂದಿರುಗಿರುವುದು ವಿಶೇಷ. ಅವರ ಪ್ರತಿ ಹೆಜ್ಜೆಯಲ್ಲೂ ಜತೆಗಿದ್ದು, ಮೂಕಪ್ರಾಣಿಗಳ ಭಾವನಾತ್ಮಕ ನಂಟನ್ನು ಜಗತ್ತಿಗೆ ತಿಳಿಸಿದೆ.