ಪತಿಯೋರ್ವ ಪತ್ನಿಯನ್ನೇ ಕೊಲೆಮಾಡಿ ತಾನು ಆತ್ಮಹತ್ಯೆಗೆ ಶರಣಾದ ಘಟನೆ ಕೊಪ್ಪಳ ತಾಲೂಕಿನ ಬುಡ್ಶೇಟ್ನಾಳ್ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಮಹಿಳೆ ಲಕ್ಷ್ಮವ್ವ ವಾಲಿಕಾರ್(36) ಹಾಗೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ನಿಂಗಪ್ಪ ವಾಲಿಕಾರ್(40) ಎಂದು ಗುರುತಿಸಲಾಗಿದೆ.
ನಿನ್ನೆ ರಾತ್ರಿ ಇಬ್ಬರ ನಡುವೆ ಗಲಾಟೆಯಾಗಿತ್ತು. ತಡರಾತ್ರಿ ಪತಿ ನಿಂಗಪ್ಪ ಪತ್ನಿ ಲಕ್ಷ್ಮವ್ವ ಮಲಗಿದ್ದ ವೇಳೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಹಣದ ವಿಷಯವಾಗಿ ಪತ್ನಿಯೊಂದಿಗೆ ನಿಂಗಪ್ಪ ಗಲಾಟೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ತೀವ್ರ ಗಾಯಗೊಂಡಿದ್ದ ಲಕ್ಷ್ಮವ್ವಳನ್ನು ಗ್ರಾಮಸ್ಥರು ಜಿಲ್ಲಾ ಆಸ್ಪತ್ರೆ ಗೆ ದಾಖಲಿಸಿದ್ದರು. ಆದರೆ ಜಿಲ್ಲಾಸ್ಪತ್ರೆಯಲ್ಲಿ ಪತ್ನಿ ಲಕ್ಷ್ಮವ್ವ ಸಾವನ್ನಪ್ಪಿದ್ದಾಳೆ. ಅತ್ತ ಗಲಾಟೆ ಮಾಡಿಕೊಂಡ ನಿಂಗಪ್ಪ ಹೊರವಲಯ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾನೆ.
ಪತಿ ನಿಂಗಪ್ಪ- ಪತ್ನಿ ಲಕ್ಷ್ಮವ್ವ ಇಬ್ಬರು ಮಂಗಳೂರಿಗೆ ದುಡಿಯಲು ಗುಳೆ ಹೋಗಿದ್ದರು. ಆದರೆ ಮಗಳು ಗರ್ಭಿಣಿ ಹಿನ್ನೆಲೆ ಇತ್ತೀಚೆಗೆ ಗ್ರಾಮಕ್ಕೆ ಬಂದಿದ್ದರು. ಅಂತರ್ಜಾತಿ ವಿವಾಹವಾಗಿದ್ದ ಈ ಜೋಡಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.