ಹುಬ್ಬಳ್ಳಿ: ಪ್ರಿಯತಮನ ಜೊತೆ ಹೊಸ ಜೀವನ ಆರಂಭಿಸಲು ಹೊರಟವಳು ಪೊಲೀಸರ ಅತಿಥಿಯಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಬಂಧಿತ ಆರೋಪಿ ಹುಬ್ಬಳ್ಳಿಯ ರಾಮಲಿಂಗೇಶ್ವರ ನಿವಾಸಿ ಶಬನಂ ಎನ್ನಲಾಗಿದೆ.
ಕೌಟುಂಬಿಕ ಕಲಹದಿಂದ ವಿಚ್ಛೇದನ ಪಡೆದ ಮಹಿಳೆ ಶಬನಂ ಮಂಡ್ಯ ಮೂಲದ ಯುವಕನನ್ನು ಪ್ರೀತಿಸುತ್ತಿದ್ದಳು. ಆ ಯುವಕನ ಜೊತೆಗೆ ಮದುವೆಯಾಗಲು ಹೊರಟ ಶಬನಂ, ಶನಿವಾರ ಹುಬ್ಬಳ್ಳಿಯಿಂದ ಬೆಂಗಳೂರಿನ ಬಸ್ಸು ಹತ್ತಿದ್ದಾಳೆ. ಆಕೆ ಹೋಗುವಾಗ ಸಂಬಂಧಿಕರೊಬ್ಬರ ಆರು ವರ್ಷದ ಮಗಳನ್ನು ಸಹ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದಾಳೆ.
ಮಾರುಕಟ್ಟೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಶಬನಂ, ಸಂಜೆಯಾದರೂ ಮನೆಗೆ ಬಾರದ ಕಾರಣ ಬಾಲಕಿಯ ಪೋಷಕರು ಆತಂಕಕ್ಕೊಳಗಾಗಿದ್ದರು. ಮಹಿಳೆಯ ಮೊಬೈಲ್ ಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ ಬಾಲಕಿ ಪೋಷಕರು ಹುಬ್ಬಳ್ಳಿಯ ಗೋಕುಲ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ತಕ್ಷಣ ಎಚ್ಚೆತ್ತ ಪೊಲೀಸರು ಮಗುವಿನ ರಕ್ಷಣೆಗೆ ತಂಡ ರಚಿಸಿದ್ದಾರೆ. ಶಬನಂ ಫೋನ್ ಟ್ರೇಸ್ ಮಾಡಿದಾಗ ಬೆಂಗಳೂರಿನಲ್ಲಿರುವುದು ಪತ್ತೆಯಾಗಿದೆ. ಕೂಡಲೇ ಹುಬ್ಬಳ್ಳಿ ಪೊಲೀಸರು, ಉಪ್ಪಾರಪೇಟೆ ಪೊಲೀಸರಿಗೆ ಮಾಹಿತಿ ನೀಡಿ, ಆಕೆಯ ಪ್ರಿಯಕರನ ಸಹಾಯದಿಂದಲೇ ಆರೋಪಿಯನ್ನು ಬಂಧಿಸಿದ್ದಾರೆ.