
ಪುತ್ತೂರು: ಪ್ರತಿಯೊಬ್ಬ ಮಹಿಳೆಯೂ ಸುನಿತಾ ವಿಲಿಯಂಸ್ ಅವರಂತೆ ಬಾಹ್ಯಾಕಾಶಕ್ಕೆ ತೆರಳುವ ಸಾಮರ್ಥ್ಯ ಹೊಂದಿದ್ದಾಳೆ. ಅದಕ್ಕಾಗಿ ಸೂಕ್ತ ವಾತಾವರಣ, ಉತ್ತಮ ಶಿಕ್ಷಣ ಮತ್ತು ಬೆಂಬಲ ದೊರೆತರೆ ಮಹಿಳೆಯರು ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಲು ಸಾಧ್ಯವೆಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಪುತ್ತೂರು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷೆ ಪ್ರಕೃತಿ ಕಲ್ಯಾಣಪುರ ಅಭಿಪ್ರಾಯಪಟ್ಟರು.ಅವರು ಅಧಿವಕ್ತಾ ಪರಿಷತ್ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಹಿಳಾ ಬಂಧುತ್ವ ವೇದಿಕೆ ಪುತ್ತೂರು ಇವರ ಸಹಯೋಗದಲ್ಲಿ ಪುತ್ತೂರಿನ ಒಕ್ಕಲಿಗ ಗೌಡ ಸೇವಾ ಸಂಘದ ಚುಂಚುಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಧಿವಕ್ತಾ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಗೌರವಾಧ್ಯಕ್ಷೆ ಶ್ರೀಮತಿ ಪುಷ್ಪಾಲತಾ ಯು.ಕೆ ಅವರು ಮಾತನಾಡಿ, ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದು ಸಮಾಜದಲ್ಲಿ ಶಕ್ತಿಯುತ ಸ್ಥಾನವನ್ನು ಪಡೆದಿದ್ದಾರೆ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಂಳತಿಮೊಗೇರು ಇದರ ಮುಖ್ಯೋಪಾಧ್ಯಾಯೆ ಸಂಧ್ಯಾರಾಣಿ ಹಾಗೂ ಮಹಿಳಾ ಬಂಧುತ್ವ ವೇದಿಕೆಯ ಸಂಚಾಲಕಿ ಸುಮಂಗಲ ಶೆಣೈ ಉಪಸ್ಥಿತರಿದ್ದರು.



ಈ ವೇಳೆ ಬನ್ನೂರು ಗ್ರಾಮ ಪಂಚಾಯತ್ನ ಸ್ವಚ್ಚವಾಹಿನಿ ಸದಸ್ಯೆ ಶ್ರೀಮತಿ ಗಿರಿಜಾ ಶಿವಪ್ಪ ನಾಯ್ಕ ಅವರನ್ನು ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಅಧಿವಕ್ತಾ ಪರಿಷತ್ ಪುತ್ತೂರು ತಾಲೂಕು ಕಾರ್ಯದರ್ಶಿ ಶ್ರೀಮತಿ ಪೂಜಾ ಬೆತ್ತಾಡಿ ಸ್ವಾಗತಿಸಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿನಿ ಕು. ವರ್ಷ ಪ್ರಾರ್ಥನೆ ಸಲ್ಲಿಸಿದರು. ನ್ಯಾಯವಾದಿ ಶ್ರೀಮತಿ ಚಂದ್ರಾವತಿ ಟಿ. ಅಂಚನ್ ವಂದಿಸಿದರು. ಕಾರ್ಯಕ್ರಮವನ್ನು ನ್ಯಾಯವಾದಿಗಳಾದ ಕು. ಅರ್ಪಿತ ಪ್ರಶಾಂತ್ ಮತ್ತು ಫಮಿದಾ ಅಕ್ತರ್ ನಿರ್ವಹಿಸಿದರು.ನಂತರ ನಡೆದ ಕಾರ್ಯಗಾರದಲ್ಲಿ ಮಹಿಳಾ ಬಂಧುತ್ವ ವೇದಿಕೆಯ ಜಿಲ್ಲಾಧ್ಯಕ್ಷೆ ಶ್ರೀಮತಿ ಪ್ರೀಮಿ ಫೆರ್ನಾಂಡಿಸ್ ಮಹಿಳೆಯರಿಗೆ ವಿವಿಧ ವಿಷಯಗಳ ಕುರಿತು ಅರಿವು ಮೂಡಿಸುವ ಮಾಹಿತಿ ನೀಡಿದರು. ಎರಡನೇ ಅವಧಿಯಲ್ಲಿ ಅಧಿವಕ್ತಾ ಪರಿಷತ್ ಮಂಗಳೂರು ತಾಲೂಕು ಅಧ್ಯಕ್ಷೆ ಶ್ರೀಮತಿ ಆಶಾ ಪಿ. ರೈ “ಮಹಿಳೆ: ದೃಷ್ಟಿ ಮತ್ತು ದಿಕ್ಕು” ವಿಷಯದ ಕುರಿತು ಉಪನ್ಯಾಸ ನೀಡಿದರು.ಕಾರ್ಯಕ್ರಮದ ಸಮಾರೋಪ ಭಾಷಣವನ್ನು ಅಧಿವಕ್ತಾ ಪರಿಷತ್ ಜಿಲ್ಲಾಧ್ಯಕ್ಷ ಶ್ರೀ ಅನಿಲ್ ಕುಮಾರ್ ಮಾಡಿದರು. ಜಿಲ್ಲಾ ಕಾರ್ಯದರ್ಶಿ ಜಯಪ್ರಕಾಶ್ ಭಂಡಾರಿ ಧನ್ಯವಾದ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಧಿವಕ್ತಾ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಜಗದೀಶ್ ಡಿ.ಪಿ., ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಜಯಪ್ರಕಾಶ್ ಎನ್., ಕಾರ್ಯದರ್ಶಿ ದೀಪಕ್ ಸೇರಿದಂತೆ ಹಲವಾರು ನ್ಯಾಯವಾದಿಗಳು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.








