ವಿಟ್ಲ: ಪಟ್ಟಣ ಪಂಚಾಯಿತಿಗೆ ದೂರು ಬಂದಾಗ ಸ್ಥಳ ಪರಿಶೀಲನೆ ನಡೆಸದೇ ಸಾಮಾನ್ಯ ಸಭೆಯಲ್ಲಿ ಮಾಜಿ ಅಧ್ಯಕ್ಷರು ನೇರವಾಗಿ ಮದರಸ ಸಮಿತಿಯವರು ರಕ್ತೇಶ್ವರೀ ದೈವಸ್ಥಾನಕ್ಕೆ ತೆರಳುವ ರಸ್ತೆಯನ್ನು ಅತೀಕ್ರಮಿಸಿ ಆವರಣಗೋಡೆ ನಿರ್ಮಿಸಿದ್ದಾರೆಂಬ ಆರೋಪ ಮಾಡಿ ಸಮಾಜಕ್ಕೆ ತಪ್ಪು ಸಂದೇಶ ಹೋಗುವಂತೆ ಮಾಡಿದ್ದಾರೆ ಎಂದು ವಿಟ್ಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಿ. ಕೆ. ಎಂ. ಅಶ್ರಫ್ ಹೇಳಿದರು.
ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಭೆಯ ದಿನದಂದು ದೂರು ಬಂದ ಸೂಕ್ಷ್ಮ ವಿಚಾರವನ್ನು ತರಾತುರಿಯಲ್ಲಿ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಪಂಚಾಯಿತಿ ಸದಸ್ಯರಾಗಿದ್ದವರು ವಾಸ್ತವವನ್ನು ತಿಳಿಯದೆ ಆರೋಪ ಮಾಡಿ ಸಮಾಜಕ್ಕೆ ತಪ್ಪು ಮಾಹಿತಿ ನೀಡಿರುವುದು ಸರಿಯಲ್ಲ. ಹಿಂದೆ ವಿವಾದ ನಡೆದ ಸಂದರ್ಭದಲ್ಲಿ ಮಾನವೀಯತೆಯ ದೃಷ್ಠಿಯಿಂದ ೮ ಮನೆಗಳಿಗೆ ಹಾಗೂ ರಕ್ತೇಶ್ವರಿ ಗುಡಿಗೆ ಹೋಗುವ ನಿಟ್ಟಿನಲ್ಲಿ ೧೨ ಅಡಿ ಅಗಲದ ರಸ್ತೆಯನ್ನು ಬಿಡಲಾಗಿದ್ದು, ಅದಕ್ಕೆ ಗೇಟ್ ನಿರ್ಮಾಣವನ್ನು ಆ ಸಂದರ್ಭದಲ್ಲಿ ಮಾಡಲಾಗಿತ್ತು ತಿಳಿಸಿದರು.
ವಿಟ್ಲದಲ್ಲಿ ಸಮುದಾಯಗಳು ಎಂಬುದನ್ನು ಬಿಟ್ಟು ಎಲ್ಲರು ಸೌಹಾರ್ಧತೆಯಿಂದ ಬದುಕು ನಡೆಸಲಾಗುತ್ತಿದೆ. ಕಪ್ಪು ಹಾಸು ಕಲ್ಲು ಇರುವ ಪ್ರದೇಶದಲ್ಲಿ ಯಾವುದೇ ತಡೆಗೋಡೆಯನ್ನು ನಿರ್ಮಿಸಿಲ್ಲ ಮತ್ತು ಅಲ್ಲಿ ರಸ್ತೆ ನಿರ್ಮಾಣಕ್ಕೂ ಸಾಧ್ಯವಿಲ್ಲದ ಪ್ರದೇಶದ ವಿಷಯವನ್ನು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಇಟ್ಟು ಮಾತಾಡುವವರು ವಿಟ್ಲ ಪೇಟೆಯ ಮುಖ್ಯ ರಸ್ತೆಗಳಲ್ಲಿರುವ ಗುಂಡಿ ಮುಚ್ಚಿಸಿ ಸಾರ್ವಜನಿಕರಿಗೆ ಸಹಕಾರವಾಗುವ ಕಾರ್ಯ ಮೊದಲು ಮಾಡಿಸಲಿ ಎಂದರು.
ಚಂದಳಿಕೆ ಮದರಸತುಲ್ ಉಸ್ಮಾನಿಯ ಅಧ್ಯಕ್ಷ ಇಸಾಕ್ ಹಾಜಿ, ಕಾರ್ಯದರ್ಶಿ ಇಕ್ಬಾಲ್, ಜತೆ ಕಾರ್ಯದರ್ಶಿ ಹರ್ಷದ್ ಇಸ್ಮಾಯಿಲ್ ವಿ. ಉಪಸ್ಥಿತರಿದ್ದರು.