ಚಿಕ್ಕಮಗಳೂರು, ಮೇ 11 : ಶೃಂಗೇರಿ ವಿಧಾನಸಭೆ ಕ್ಷೇತ್ರದ ಮರು ಮತ ಎಣಿಕೆ ಫಲಿತಾಂಶಕ್ಕೆ ಸೋಮವಾರ ಸುಪ್ರೀಂಕೋಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ರಾಜೇಗೌಡ ಅವರ ಶಾಸಕತ್ವನ್ನು ಮರು ಸ್ಥಾಪನೆಗೆ ಆದೇಶಿಸಿದೆ.ಹೈಕೋರ್ಟ್ ಆದೇಶದ ಮೇರೆಗೆ ಕಳೆದ ಮೇ 2ರಂದು ಅಂಚೆ ಮತಗಳ ಮರು ಮತ ಎಣಿಕೆ ನಡೆದಿದ್ದು, ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಜೀವರಾಜ್ 52 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಅವರನ್ನು ಪರಭಾವಗೊಳಿಸಿದ್ದರು. ಚುನಾವಣಾ ಆಯೋಗ ಜೀವರಾಜ್ ಅವರು ಅಂಚೆ ಮತಗಳ ಮರು ಮತ ಎಣಿಕೆಯಲ್ಲಿ ಗೆದ್ದಿದ್ದಾರೆಂದು ಘೋಷಿಸಿ ಪ್ರಮಾಣ ಪತ್ರವನ್ನು ನೀಡಿತ್ತು.
ಮರು ಮತ ಎಣಿಕೆ ವೇಳೆ ಅಕ್ರಮ ನಡೆದಿದ್ದು, 2023ರ ಚುನಾವಣಾ ಫಲಿತಾಂಶದ ವೇಳೆ ಸಿಂಧುವಾಗಿದ್ದ ಅಂಚೆ ಮತಗಳು ಮರು ಮತ ಎಣಿಕೆ ವೇಳೆ ಅಸಿಂಧು ಆಗಿವೆ, ಅಲ್ಲದೇ ಮತಪತ್ರಗಳಿದ್ದ ಕವರ್ಗಳ ಸೀಲ್ ಒಡೆದಿದೆ, ಮತ ಪತ್ರಗಳಿದ್ದ ಬಾಕ್ಸ್ ಗಳ ಬೀಗ ಒಡೆಯಲಾಗಿದ್ದು, ಜೀವರಾಜ್ ಹಾಗೂ ಇತರರು ಅಕ್ರಮ ಎಸಗಿದ್ದಾರೆಂದು ಆರೋಪಿಸಿ ಚುನಾವಣಾ ಆಯೋಗ ಮತ್ತು ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದರು.
ಈ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಅವರು ಅಂಚೆ ಮತಗಳ ಮರು ಮತ ಎಣಿಕೆ ತೀರ್ಪಿ ವಿರುದ್ಧ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದು, ಸೋಮವಾರ ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಸಂಜಯ್ಕುಮಾರ್ ಹಾಗೂ ವಿನೋದ್ ಚಂದ್ರ ಅವರಿದ್ದ ಪೀಠ ಜೀವರಾಜ್ ಅವರನ್ನು ಶಾಸಕರನ್ನಾಗಿ ಘೋಷಿಸಿರುವುದಕ್ಕೆ ತಡೆಯಾಜ್ಞೆ ನೀಡಿದೆ. ಅಲ್ಲದೇ ರಾಜೇಗೌಡ ಅವರ ಶಾಸಕತ್ವವನ್ನು ಮರುಸ್ಥಾಪನೆಗೆ ಆದೇಶಿಸಿದ್ದು, ಮೇ 21ರಂದು ಮುಂದಿನ ವಿಚಾರಣೆ ಮುಂದೂಡಿ ಆದೇಶಿಸಿದೆ.








