ಮಂಗಳೂರು : ಯುವ ದಂತ ವೈದ್ಯೆಯೊಬ್ಬರು ಹಠತ್ತಾಗಿ ಸಾವನ್ನಪ್ಪಿದ ಘಟನೆ ಮಂಗಳೂರಿನ ಪಾಂಡೇಶ್ವರ ಪಿಜಿಯಲ್ಲಿ ನಡೆದಿದೆ.
ಡಾ. ಸ್ವಾತಿ ಶೆಟ್ಟಿ (24) ಮೃತರಾದ ವೈದ್ಯೆಯಾಗಿದ್ದಾರೆ.
ನಗರದ ಎ.ಜೆ. ಆಸ್ಪತ್ರೆಯಲ್ಲಿ ದಂತ ವೈದ್ಯಕೀಯ ಪದವಿ ಪೂರೈಸಿದ್ದ ಸ್ವಾತಿ ಇಂದಿನಿಂದ ನಗರದ ಪಾಂಡೇಶ್ವರದ ಕ್ಲಿನಿಕ್ ಒಂದರಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಲಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ತನಕ ಆಳ್ವರಬೆಟ್ಟು ಮನೆಯಲ್ಲಿ ತಂಗಿದ್ದ ಸ್ವಾತಿ ಸೋಮವಾರ ಸಂಜೆ ಮನೆಯಿಂದ ಪಾಂಡೇಶ್ವರದ ಪಿಜಿಗೆ ಬಂದು ತಂಗಿದ್ದರು.
ರಾತ್ರಿ ಹೆತ್ತವರ ಜತೆಗೆ ಫೋನ್ನಲ್ಲಿ ಮಾತನಾಡಿ ಬಳಿಕ ವಿಪರೀತ ತಲೆನೋವು ಹಾಗೂ ನಾಳೆ ಮಾತನಾಡುತ್ತೇನೆ ಎಂದು ಹೇಳಿ ಫೋನ್ ಕರೆ ಕಟ್ ಮಾಡಿದ್ದರು. ಪಕ್ಕದ ಸಹಪಾಠಿ ಕೂಡ ತಲೆನೋವು ಿದ್ದ ಕಾರಣ ತೊಂದರೆ ಕೊಡುವುದು ಬೇಡ ಎಂದು ಎಚ್ಚರಿಸಲಿಲ್ಲ ಎನ್ನಲಾಗಿದೆ. ಬೆಳಗ್ಗೆ ದೇಹ ತಣ್ಣಗಾಗಿದ್ದನ್ನು ಕಂಡು ಪಿಜಿ ಸೂಪರ್ ವೈಸರ್ಗೆ ಮಾಹಿತಿ ನೀಡಿ ತಕ್ಷಣ ಆಂಬ್ಯುಲೆನ್ಸ್ ತರಿಸಿ ವೆನ್ ಲಾಕ್ ಗೆ ದಾಖಲಿಸುವಷ್ಟರಲ್ಲಿ ಸ್ವಾತಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ಅವಿವಾಹಿತೆಯಾಗಿರುವ ಸ್ವಾತಿ ಶೆಟ್ಟಿ ಅವರಿಗೆ ಪೋಷಕರು ಈ ವರ್ಷಾಂತ್ಯದೊಳಗೆ ಮದುವೆ ಮಾಡುವ ತಯಾರಿ ನಡೆಸಿದ್ದರು. ಅಪರೂಪಕ್ಕೊಮ್ಮೆ ತಲೆನೋವು ಬಿಟ್ಟರೆ ಬೇರೆ ಯಾವುದೇ ತೊಂದರೆ ಇರಲಿಲ್ಲ ಎನ್ನಲಾಗಿದೆ.