ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನಿನ ಕಲಶವಯ್ಯ| ಎಂದರು ಶರಣರು.
ಇದು ಸಮರ್ಪಣಾ ಭಾವವನ್ನು ತೋರುತ್ತದೆ ವಿನಃ ಅಸಹಾಯಕತೆಯನ್ನಲ್ಲ. ಮಾನವ ಶರೀರ ಶ್ರೇಷ್ಠವಾಗಿರುವುದೇಕೆಂದರೆ ಪೂರ್ವ ಜನ್ಮಗಳ ಕರ್ಮಬಂಧಗಳ ಫಲಾನು ಫಲದಿಂದ ಎನ್ನುತ್ತಾರೆ ಬಲ್ಲವರು. ದೇಹದಷ್ಟೇ ಆತ್ಮ ಯಾ ಉಸಿರು ಪೂಜಾರ್ಹ. ದೇವಾಲಯ ದೇಹವಾದರೆ ಆತ್ಮ ಪ್ರಾಣಪ್ರತಿಷ್ಠೆ ಗೊಂಡ ವಿಗ್ರಹ.ನಾವು ಆಸ್ತಿಕರೋ…. ನಾಸ್ತಿಕರೋ ಆಯಸ್ಸು ಇರೋ ವರೆಗೂ ನಿಲ್ಲದೆ,ನಿರಂತರ ಚಲನ ಶೀಲತೆ ಪಡೆದ ಅಪಾರ ಶಕ್ತಿ ಹೊಂದಿದ ಪ್ರಾಣಧಾರಿಗಳು.ಇದರ ಸೃಷ್ಟಿ ಯೋಚನೆಗೆ ನಿಲುಕದ್ದು.
ಪವಿತ್ರ ಯೋಚನೆಯ ಮೆದುಳು ನಿಯಂತ್ರಕ ಕೊಠಡಿ. ಪಂಚೆಂದ್ರೀಯಗಳು ಗ್ರಹಿಸಿ ಉತ್ತರ ಕೊಡುವ ಸೇನ್ಸಾರ್ ಗಳು. ಬೆನ್ನು ಮೂಳೆ ಚೇಸ್. ಇನ್ನು ದೇಹದೊಳಗಿನ ಇಂಜಿನ್ ಬಗ್ಗೆ ನಿಖರತೆ ಯಾರಿಗೂ ಇಲ್ಲ. ಕಾಲು ಕೈ ಸಮತೋಲನ ಚಕ್ರಗಳು. ಇಷ್ಟೇ ನಮ್ಮ ಗ್ರಹಿಕೆಗೆ ಸಿಗುವುದು. ಇಷ್ಟರಲ್ಲೇ ನಾವು ಗ್ರಹದಿಂದ ಗ್ರಹಕ್ಕೆ ಹಾರುವಷ್ಟರ ಮಟ್ಟಿಗೆ ಸಾಧಕರಾಗಿದ್ದೇವೆ.
ಹಣ್ಣುಗಳಿರುವ ಮರಕ್ಕೆ ಜನ ಕಲ್ಲೆಸೆಯುತ್ತಾರೆ. ಪವಿತ್ರತೆ ಹೊಂದಿದ ದೇವಾಲಯಗಳಿಗೆ ಭ್ರಷ್ಟತೆ ತಂದು ತಮ್ಮದಾಗಿಸಿಕೊಳ್ಳುತ್ತಾರೆ. ಹಾಗೆಯೇ ಸೃಷ್ಟಿಕರ್ತನ ದೇಹ ರೋಗಾದಿಗಳ ಹೋರಾಟದಿಂದ ವಿನಾಶ ಹೊಂದುತ್ತದೆ. ಹೀಗಿರುತ್ತಾ ರಕ್ಷಿಸುವ ಹೊಣೆಗಾರಿಕೆ ದೇಹಹೊಂದಿದ ನಮಗಿರಲೇ ಬೇಕಲ್ಲವೇ.
ವಿನಾಶಕಾಲೆ ವಿಪರೀತ ಬುದ್ದಿ ಎನ್ನುತ್ತಾರೆ. ಅತಿಯಾದ ವ್ಯಾಮೋಹ ದೃತಿಗೆಡಿಸುತ್ತದೆ. ಯಾವುದು ಎಷ್ಟು ಬೇಕೋ ಅಷ್ಟಿದ್ದರೇನೇ ನೈಜತೆಯಿರುವುದು. 2 ಟನ್ ಒಯ್ಯುವ ಲಾರಿಯಲ್ಲಿ 4 ಟನ್ ಹೇರುವ ಪ್ರಯತ್ನವಾದಂತೆ, ದೇಹದ ಸಾಮರ್ಥ್ಯಕ್ಕೆ ಅನುಗುಣವಾಗಿ ಶ್ರಮ , ಅಲಂಕಾರ, ಒತ್ತಡ ವಿರಬೇಕೇ ಹೊರತು ಇನ್ನೊಬ್ಬರ ಆಕರ್ಷಣೆಗೆ, ಹಣದಾಸೆಗೆ, ಆಸ್ತಿಯಾಸೆಗೆ ದೇಹ ಯಾ ಆತ್ಮವನ್ನು ದಂಡಿಸಬಾರದು.
“ಆರೋಗ್ಯವೇ ಬಾಗ್ಯ”ವೆನ್ನುವುದು ನಮ್ಮ ಮನಸ್ಸಿನೊಳಗೆ ಅಚ್ಚಾಗಿದೆಯಾದರೂ ಬಾಹ್ಯ ಕಾಮನೆಗಳಿಗೆ ಬಲಿಯಾಗಿ ನಮ್ಮ ಆರೋಗ್ಯವನ್ನೇ ಕೆಡಿಸಿಕೊಳ್ಳಲಿಲ್ಲವೇ ನೀವೇ ಪ್ರಶ್ನಿಸಿಕೊಳ್ಳಿ. ದೇಹದ ಪ್ರತಿ ಅಂಗಾಂಗಗಳು ಒಳ್ಳೆಯದಕ್ಕಿಂತ ಕೆಟ್ಟವುಗಳನ್ನು ಹೆಚ್ಚು ಬಯಸುತ್ತದೆ, ಅವುಗಳ ವಾಂಛೆಗಳನ್ನು ತೀರಿಸಲು ಹೋದರೆ ಕುಡಿಕೆ ಹೊನ್ನು ಸಾಲದು ಹೆಚ್ಚಾಗಿ ಪವಿತ್ರ ದೇಹಕ್ಕೆ ಕೊನೆಯಿರದ ರೋಗಾದಿಗಳು ಬಾದಿಸಬಹುದು. ಒಂದು ವಿಗ್ರಹಕ್ಕೆ, ದೇವಾಲಯಕ್ಕೆ ಬಿಂಬ ಕಲಶ ವಾದಂತೆ, ಗಣಕಯಂತ್ರಕ್ಕೆ ರಿಫ್ರೆಶ್ ಮಾಡೋ ಹಾಗೇ ದೇಹಕ್ಕೂ ಮನಸಿಗೂ ಹೊಸ ಚೇತನ ಕೊಡುವುದಕ್ಕೆ “ಹಾಗೇ ಸುಮ್ಮನೆ” ವಿಹಾರಗಳು, ಪ್ರೇಕ್ಷಣೀಯ ಸ್ಥಳಗಳ ಭೇಟಿ, ದೇಗುಲಗಳ ದರ್ಶನಗಳ ಅಗತ್ಯತೆಯಿದೆ. ಕೃಷಿ ಸಾಧ್ಯವಿದ್ದರೆ ಉನ್ನತ ವ್ಯಾಯಾಮ ಮತ್ತು ಆರೋಗ್ಯಕರ ಆಹಾರ ದೇಹವನ್ನು ಆರೋಗ್ಯವಾಗಿಸಬಹುದು.
“ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ” ಎಂಬಂತೆ ಎಳವೆಯಲ್ಲಿ ಬಗ್ಗಿಸದ ಈ ದೇಹ ಬೆಳೆದ ನಂತರ ಅದು ಹೇಗೆ ಸ್ವಾಭಾವಿಕ ಚಟುವಟಿಕೆ ಕೊಟ್ಟೀತು ಹೇಳಿ, ಯೋಗ, ವಾಕಿಂಗ್, ಡಯಾಟಿಂಗ್, ಸಪ್ಪೆ ಆಹಾರ ಎಷ್ಟರ ಮಟ್ಟಿಗೆ ದೇಹವನ್ನು ಸರಿಪಡಿಸೀತು ಹೇಳಿ. ಹಾಸಿಗೆ ಇದ್ದಷ್ಟು ಕಾಲು ಚಾಚಿ ಮನಸ್ಸೆಂಬ ಹಾಸಿಗೆ ಭದ್ರವಾಗಿರಿಸಬೇಕೆ ವಿನಃ ಮತ್ತೆ ಮಾನಸಿಕ ತುಮುಲಕ್ಕೆ ಮನಸ್ಸನ್ನೇಕೆ ಸಿದ್ದಗೊಳಿಸುತ್ತೀರಿ? “ಕೆಟ್ಟ ಮೇಲೆ ಬುದ್ದಿ” ಎಂಬಂತೆ ಅನಿವಾರ್ಯತೆಗಳಿಗೆ ಬಲಿಯಾಗೋ ಮೊದಲು ಕಷ್ಟವಾದರೂ ಎಚ್ಛೆತ್ತುಕೊಳ್ಳೋಣ.
ಬಲಿತ ಮರವ ಇರುವಂತೆ ಅನುಭಿಸಬೇಕಷ್ಟೆ. ಚಿಗುರು ಮನಸುಗಳೇ ಅರಿತು ಬಾಳುವ ಪಣವ ತೊಡಿ. ನೀವಿನ್ನೂ ಅಶ್ರಿತರಾಗಿದ್ದೀರಿ. ಮುದ್ದು ಮಡಿಲ ತೊರೆವ ಮೊದಲು ಸಂಸ್ಕಾರವನ್ನು ಅಪ್ಪಿಕೊಳ್ಳಿ, ದೇಹಾರೋಗ್ಯದ ಆಹಾರ, ವ್ಯಾಯಾಮ, ದೀರ್ಘ ಉಸಿರಾಟ ದಿನಚರಿಯಾಗಲಿ. ಬದುಕಲ್ಲಿ ಒಳ್ಳೆಯ ನಡೆಯಿರಲಿ ಬಾಯಲ್ಲಿ ಒಳ್ಳೆಯ ನುಡಿಯಿರಲಿ ಬಡವರೋ, ಸಿರಿವಂತರೋ ಇನ್ನೊಂದು ಮಾತಾಪಿತೃಗಳನ್ನು ಪಡೆಯಲಾರೆವು ಉಳಿಸಿಕೊಳ್ಳಿ,ಒಲಿಸಿಕೊಳ್ಳಿ. “ಇರುವ ಭಾಗ್ಯವ ನೆನೆದು ಬಾರೇನೆoಬುದನು ಬಿಡು ಹರುಷಕ್ಕಿದೆ ದಾರಿ” ನೆನಪಲ್ಲಿರಲಿ.
ರಾಧಾಕೃಷ್ಣ ಎ
ಆಡಳಿತಾಧಿಕಾರಿ