

ವಿಟ್ಲ: ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ಆಶ್ರಯದಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ನರಹರಿ ಪರ್ವತದ ಪಾವಿತ್ರ್ಯತೆ ಹಾಳುಗೆಡುವುತ್ತಿರುವ ಷಡ್ಯಂತ್ರದ ವಿರುದ್ದ ಜನಜಾಗೃತಿ, ಪಾದಯಾತ್ರೆ, ಸಾರ್ವಜನಿಕ ಸಭೆ ನಡೆಯಲಿದೆ.
ಅ.17ರಂದು ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಇದರ ನೇತೃತ್ವದಲ್ಲಿ ನಮ್ಮ ನಡಿಗೆ ನರಹರಿ ಕಡೆಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಕಲ್ಲಡ್ಕ ಮತ್ತು ಮೆಲ್ಕಾರಿನಿಂದ ಭಾನುವಾರ ಬೆಳಗ್ಗೆ 7ಗಂಟೆಗೆ ಪಾದಯಾತ್ರೆ ನಡೆಯಲಿದೆ. ಖ್ಯಾತ ಬಾಲವಾಗ್ಮಿ ಹಾರಿಕಾ ಮಂಜುನಾಥ್ ರವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.


ಹಿಂದೂ ಸಮಾಜದ ಶ್ರದ್ಧಾ ಕೇಂದ್ರಗಳಾದ ದೇವಸ್ಥಾನಗಳ ಪಾವಿತ್ರ್ಯ ರಕ್ಷಣೆಗೆ. ದೇವಾಲಯಗಳು ಹಿಂದೂ ಸಮಾಜದ ಭಕ್ತಿಯ ಕೇಂದ್ರ- ಜ್ಞಾನದೇಗುಲ- ಯೋಗಕೇಂದ್ರ- ಆಧ್ಯಾತ್ಮ ಮಂದಿರ -ಧಾರ್ಮಿಕ ಕೇಂದ್ರ – ಶಿಕ್ಷಣ , ಸಂಸ್ಕಾರ ನೀಡುವ ತಾಣ- ಕಲೆ, ಸಾಹಿತ್ಯದ ಆಶ್ರಯಧಾಮ ಸಂಘಟನೆ ಮತ್ತು ಸಾಮರಸ್ಯದ ನೆಲೆಬೀಡು, ಸಂಪತ್ತಿನ ಕಣಜ, ಕ್ಷಾತ್ರ ತೇಜಸ್ಸನ್ನು ಬಡಿದೆಬ್ಬಿಸಿದ ಸ್ಪೂರ್ತಿ ಕೇಂದ್ರ.
ವ್ಯಕ್ತಿಗತವಾಗಿ, ಸಾಂಸಾರಿಕವಾಗಿ, ಕೌಟುಂಬಿಕವಾಗಿ, ಸಾಮಾಜಿಕವಾಗಿ ರಾಷ್ಟ್ರೀಯವಾಗಿ ಎಲ್ಲ ಮೌಲ್ಯಗಳನ್ನು- ಸದ್ಗುಣಗಳನ್ನು- ಸದ್ಭಾವ- ಸಂಸ್ಕಾರವನ್ನು ನೀಡಿ, ಆತ್ಮಶಕ್ತಿಯನ್ನು ಜಾಗೃತಗೊಳಿಸುವ ಸಮಾಜದ ಭಕ್ತಿ ಮತ್ತು ಶಕ್ತಿಯ ಶ್ರದ್ಧಾ ಕೇಂದ್ರಗಳು ದೇವಾಲಯಗಳು.

ಅಂತಹ ಪವಿತ್ರ ಕ್ಷೇತ್ರಗಳಲ್ಲಿ ಒಂದು ನರಹರಿ ಸದಾಶಿವ ದೇವಾಲಯ. ಬೆಟ್ಟದ ಶಿಖರದಲ್ಲಿ ಈ ದೇವಸ್ಥಾನ ಶೋಭಿಸುತ್ತಿದ್ದು, ಅಲ್ಲಿ ಶಂಖ, ಚಕ್ರ ,ಗದಾ ,ಪದ್ಮ ಎಂಬ ಹೆಸರಿನ 4 ತೀರ್ಥಗಳು ಭಕ್ತರನ್ನು ಆಕರ್ಷಿಸುತ್ತಿವೆ. ಈ ಕ್ಷೇತ್ರದ ಪಾವಿತ್ರ್ಯತೆಯನ್ನು ಕೆಡಿಸುವ ಕೃತ್ಯಗಳು ನಡೆಯುತ್ತಿದೆ. ಇದರ ಕಡೆಗೆ ಹಿಂದೂ ಸಮಾಜದ ಗಮನ ಸೆಳೆಯಲು ಈ “ನರಹರಿ ಉಳಿಸಿ” ಆಂದೋಲನ- ಪಾದಯಾತ್ರೆ. ಈ ದೇಶದ ಮಾನ ಬಿಂದುಗಳಲ್ಲಿ ಒಂದಾದ ದೇವಾಲಯಗಳ ಪಾವಿತ್ರ್ಯ ರಕ್ಷಣೆಯ ಈ ದೇವ ಕಾರ್ಯದಲ್ಲಿ ಸಮಸ್ತ ಹಿಂದು ಬಂಧುಗಳು ಸಂಪೂರ್ಣ ಸಹಕಾರ ನೀಡಬೇಕಾಗಿ ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ಪ್ರಕಟನೆಯಲ್ಲಿ ತಿಳಿಸಿದ್ದಾರೆ.









