ಅಂಕೋಲಾ: ಕೋವಿಡ್ ಹಾಗೂ ನೆರೆಗೆ ಸಂಬಂಧಿಸಿದಂತೆ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು. ಆ ಸಭೆಗೆ ಧಾವಿಸುತ್ತಿದ್ದ ವೇಳೆ ಅಧಿಕಾರಿಗಳ ಕಾರು ತಾಲೂಕಿನ ಬಾಳೆಗುಳಿ ಸಮೀಪ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓರ್ವ ಅಧಿಕಾರಿ ಮೃತಪಟ್ಟು ನಾಲ್ವರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಮಾನ್ಯ ಉಸ್ತುವಾರಿ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಕಾರವಾರಕ್ಕೆ ಸಭೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಈ ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸಚಿವರು ಅಂಕೋಲಾ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡ ಅಧಿಕಾರಿಗಳನ್ನು ಮಂಗಳೂರಿಗೆ ಸಾಗಿಸುವುದಕ್ಕೆ ಖುದ್ದು ತಾವೇ ಎಲ್ಲಾ ವ್ಯವಸ್ಥೆಯನ್ನು ಮಾಡಿದ್ದರು.
ಅಪಘಾತದಲ್ಲಿ ಮೃತರಾದ ಸಿದ್ದಾಪುರ ತಾಲೂಕಿನ ಲೋಕೋಪಯೋಗಿ ಎ.ಇ.ಇ ಮುದುಕಣ್ಣನವರ ಅವರ ಪಾರ್ಥಿವ ಶರೀರಕ್ಕೆ ಮಾನ್ಯ ಸಚಿವರು ಅಂತಿಮ ನಮನ ಸಲ್ಲಿಸಿದರು.ಈ ವೇಳೆ ಶಾಸಕ ಶ್ರೀ ದಿನಕರ ಕೆ ಶೆಟ್ಟಿ ಹಾಗೂ ಮಂಡಲಾಧ್ಯಕ್ಷ ಶ್ರೀ ಸಂಜಯ್ ನಾಯ್ಕ ಹಾಗೂ ಸ್ಥಳೀಯ ಮುಖಂಡ ಶ್ರೀ ಭಾಸ್ಕರ್ ನಾರ್ವೆಕರ್, ಸ್ಥಳೀಯ ಮುಖಂಡರು ಹಾಜರಿದ್ದರು.