ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರ ವಿರುದ್ಧ ನಕಲಿ ಜಾತಿ ಪ್ರಮಾಣ ಪತ್ರ ಆರೋಪದ ವಿರುದ್ಧ ಸಮರವನ್ನೇ ಸಾರಿದ್ದಕ್ಕಾಗಿ, ಐಪಿಎಸ್ ಅಧಿಕಾರಿ ಡಾ.ಪಿ.ರವೀಂದ್ರನಾಥ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಈ ನಡೆಯಿಂದ ಬೇಸರಗೊಂಡಿರುವಂತ ತರಬೇತಿ ವಿಭಾಗ ಡಿಜಿಪಿ ಡಾ.ಪಿ.ರವೀಂದ್ರನಾಥ್ ತಮ್ಮ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಈ ಸಂಬಂಧ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಕಲಿ ಜಾತಿ ಪ್ರಮಾಣ ಪತ್ರದಲ್ಲಿ ಸಮರವನ್ನೇ ಸಾರಿದ್ದೆ. ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರಿಗೆ ನೋಟಿಸ್ ಕೂಡ ನೀಡಲಾಗಿತ್ತು. ಅವರು ತಮ್ಮ ವಕೀಲರ ಮೂಲಕ ನೋಟಿಸ್ ಗೆ ಉತ್ತರ ನೀಡಿ 10 ದಿನಗಳ ಕಾಲಾವಕಾಶವನ್ನು ಕೇಳಿದ್ದರು. ಈ ಹಂತದಲ್ಲಿಯೇ ನನ್ನ ವರ್ಗಾವಣೆ ಮಾಡಿದ್ದು ಬೇಸರ ತಂದಿತ್ತು ಎಂದರು.
ನೋಟಿಸ್ ನೀಡಿದ್ದರ ಹಿಂದೆ ನನ್ನ ಯಾವುದೇ ಪಾತ್ರವಿರಲಿಲ್ಲ. ಈ ಪ್ರಕರಣದಲ್ಲಿ ನನ್ನ ಯಾವುದೇ ಕೈವಾಡವೂ ಇಲ್ಲ. ಹೀಗಿದ್ದೂ ನನ್ನ ವರ್ಗಾವಣೆಯಿಂದ ನನ್ನ ಬಗ್ಗೆ ಜನರಿಗೆ ತಪ್ಪು ಸಂದೇಶ ಹೋಗಬಾರದು. ಜವಾಬ್ದಾರಿಯುತವಾಗಿ ನಾನು ಮಾತನಾಡುತ್ತಿದ್ದೇನೆ ಎಂದರು.
1995ರಿಂದಲೇ ರಾಜ್ಯದಲ್ಲಿ ಎಸ್ಸಿ, ಎಸ್ಟಿ ಕಾಯ್ದೆ ಜಾರಿಯಲ್ಲಿದೆ. ಪೊಲೀಸ್ ಇಲಾಖೆಯಲ್ಲೂ ಕಾಯ್ದೆ ಜಾರಿಗೆ ಮನವಿ ಮಾಡಿದ್ದೆ. ಆದ್ರೇ ಸರ್ಕಾರ ಮಾತ್ರ ಪದೇ ಪದೇ ಕೇಳಿದ್ರು ನಿರ್ಲಕ್ಷ್ಯತನ ತೋರುತ್ತಿತ್ತು. ಇದು ಬೇಸರ ತಂದಿತ್ತು. ಈ ಎಲ್ಲಾ ಕಾರಣದಿಂದಾಗಿ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿರೋದಾಗಿ ತಿಳಿಸಿದರು.
ಅಂದಹಾಗೇ ಐಪಿಎಸ್ ಅಧಿಕಾರಿ ಡಾ.ರವೀಂದ್ರನಾಥ್ ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿರೋದು ಇದೇನು ಮೊದಲೇನು ಅಲ್ಲ. ಈ ಹಿಂದೆ ಮೂರು ಬಾರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈಗ ನಾಲ್ಕನೇ ಬಾರಿ ತಮ್ಮ ಐಪಿಎಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.