ಪುತ್ತೂರು: ಗಾಂಜಾ ಸೇವಿಸಿ ಮೋಜು ಮಸ್ತಿಯಲ್ಲಿ ಸಾರ್ವಜನಿಕವಾಗಿ ತೊಂದರೆಯುಂಟು ಮಾಡುತ್ತಿದ್ದ ಯುವಕರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಪುತ್ತೂರಿನ ಹಾರಾಡಿ ಎಂಬಲ್ಲಿ ನಡೆದಿದೆ.
ಹಾರಾಡಿ ಸಮೀಪ ಯುವಕರ ತಂಡ ಒಂದು ಸಾರ್ವಜನಿಕ ಸ್ಥಳದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಮೇರೆಗೆ ಪುತ್ತೂರು ನಗರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಐವರು ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಒಳಮೊಗರು ಗ್ರಾಮದ ಪರ್ಪುಂಜ ನಿವಾಸಿ ಕನಿಷ್ಕ ಶೆಟ್ಟಿ (25), ಕರ್ಕುಂಜದ ಸಿಂಗಾಣಿ ನಿವಾಸಿ ಪ್ರಜ್ವಲ(28), ಕೊಡಿಪ್ಪಾಡಿ ನಿವಾಸಿ ಹಿತೇಶ್ ನಾಯ್ಕ್(19), ನಂದಿಲ ನಿವಾಸಿ ನವನೀತ್ ಎಸ್ ಬಿ(23), ಬನ್ನೂರು ನಿವಾಸಿ ಕಿಶನ್ ಕುಮಾರ್(24) ಬಂಧಿತ ಆರೋಪಿಗಳು.
ಪುತ್ತೂರು ಕಸ್ಬಾ ಗ್ರಾಮದ ನಂದಿಲ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಐದು ಮಂದಿ ಯುವಕರು ಸಾರ್ವಜನಿಕರನ್ನುದ್ದೇಶಿಸಿ ಹೀನಾಯವಾಗಿ ಮಾತನಾಡುತ್ತಾ ತೊಂದರೆ ಉಂಟು ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕಾಗಮಿಸಿ ಸಾರ್ವಜನಿಕ ಸ್ಥಳದಲ್ಲಿ ಐವರು ಯುವಕರು ಅನುಚಿತವಾಗಿ ವರ್ತಿಸುತ್ತಾ ಸಾರ್ವಜನಿಕರಿಗೆ ಮುಜುಗರವಾದ ರೀತಿಯಲ್ಲಿ ವರ್ತಿಸುತ್ತಿರುವುದು ಕಂಡು ಬಂದಿದೆ.
ಅವರನ್ನು ವಿಚಾರಿಸಿದಾಗ ಯಾವುದೋ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ಸಂಶಯ ಕಂಡು ಬಂದ ಮೇರೆಗೆ ಐವರು ಯುವಕರನ್ನು ಬಂಧಿಸಿ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಯುವಕರು ಗಾಂಜಾ ಸೇವನೆ ಮಾಡಿರುವುದು ಸ್ಪಷ್ಟವಾಗಿ ತಿಳಿದು ಬಂದಿದೆ.
ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 63/2022 ಕಲಂ: 27(ಬಿ) ಎನ್.ಡಿ.ಪಿ.ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.