ಬಂಟ್ವಾಳ: ಸಾರ್ವಜನಿಕ ಹಿತಾಸಕ್ತಿಯನ್ನು ಕಡೆಗಣಿಸಿ ಕೇವಲ ಹಣಗಳಿಸುವ ಉದ್ದೇಶದಿಂದ ಕಾಮಗಾರಿ ನಡೆಸುವುದಾದರೆ ಅದಕ್ಕೆ ಎಂದಿಗೂ ನಮ್ಮ ವಿರೋಧವಿದೆ ಎಂದು ಕಳ್ಳಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಾಮೋದರ ನೆತ್ತರಕೆರೆ ಹೇಳಿದರು.
ಅವರು ಬ್ರಹ್ಮರಕೂಟ್ಲು ರಾಷ್ಟ್ರೀಯ ಹೆದ್ದಾರಿಯ ಟೋಲ್ ಗೇಟ್ ಸಮೀಪ ಡಿವೈಡರ್ ಅಳವಡಿಸುವ ಬಗ್ಗೆ ಹೆದ್ದಾರಿ ಇಲಾಖೆ ಮಂಗಳವಾರ ಮತ್ತೆ ಕಾಮಗಾರಿ ಕೈಗೊಳ್ಳುವುದನ್ನು ತಡೆದು ಈ ರೀತಿ ನುಡಿದರು.
ಬ್ರಹ್ಮರಕೂಟ್ಲು ಪ್ರದೇಶದಿಂದ ನಿತ್ಯ ಸಂಚರಿಸುವ ಸಾವಿರಾರು ಗ್ರಾಮಸ್ಥರಿಗೆ ಇದರಿಂದ ತೊಂದರೆಯಾಗುತ್ತದೆ. ಇಂಜಿನಿಯರ್ ಬ್ರಹ್ಮರಕೂಟ್ಲು ಪ್ರದೇಶದಲ್ಲಿ ಡಿವೈಡರ್ ಮುಚ್ಚಿಸಿ ಬಿಸಿರೋಡು ಕಡೆಯಿಂದ ಬರುವವರು ತಲಪಾಡಿಯಿಂದ ಸರ್ವಿಸ್ ರಸ್ತೆ ಮೂಲಕ ಬರಲು ತಿಳಿಸುತ್ತಿದ್ದಾರೆ.
ಆದರೆ ಕಳೆದ 10 ವರ್ಷಗಳ ಘಟಕಗಳನ್ನು ಪರಿಶೀಲಿಸಿದಾಗ ಬ್ರಹ್ಮರಕೂಟ್ಲು ಜಂಕ್ಷನ್ ಬಳಿ ಹೆದ್ದಾರಿಯಲ್ಲಿ ಒಂದೂ ಅಪಘಾತಗಳು ಸಂಭವಿಸಿಲ್ಲ. ಬದಲಾಗಿ ತಲಪಾಡಿಯಲ್ಲಿ ಸರ್ವಿಸ್ ರಸ್ತೆಗೆ ತಿರುವು ಪಡೆಯುವ ವೇಳೆ ಅನೇಕ ಅಪಘಾತಗಳು ನಡೆದಿವೆ. ತಲಪಾಡಿ ತಿರುವು ಅಪಾಯಕಾರಿ ಯಾಗಿದ್ದು, ಇಲ್ಲಿ ವಾಹನಗಳ ವೇಗವೂ ಅತಿಯಾಗಿರುತ್ತದೆ. ಒಮ್ಮಿಂದೊಮ್ಮೆಲೆ ವಾಹನ ತಿರುವು ಪಡೆಯುವುದೂ ಅಸಾಧ್ಯ. ಹಾಗಾಗಿ ಹಿಂದಿನಿಂದ ಬರುವ ವಾಹನಗಳು ಡಿಕ್ಕಿಹೊಡೆಯುವ ಪ್ರಸಂಗ ಪ್ರತಿನಿತ್ಯ ಮಾಮೂಲಿಯಾಗಿದೆ.
ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ. ಎಲ್ಲಾ ರೀತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನೀಲನಕ್ಷೆ ರೂಪಿಸಿ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಕಾಮಗಾರಿ ನಡೆಸಿದರೆ ಅದಕ್ಕೆ ನಮ್ಮ ಬೆಂಬಲವಿದೆ.
ಸುಂಕ ಪಾವತಿಯನ್ನು ತಪ್ಪಿಸಲು ಕೆಲವರು ಸರ್ವಿಸ್ ರಸ್ತೆಯನ್ನು ಬಳಸಿ ಬ್ರಹ್ಮರಕೂಟ್ಲು ಪ್ರದೇಶದಲ್ಲಿ ಹೆದ್ದಾರಿ ಪ್ರವೇಶಿಸುತ್ತಾರೆ. ಇದಕ್ಕಾಗಿ ಡಿವೈಡರ್ ಅಳವಡಿಸುವ ಅಗತ್ಯವಿಲ್ಲ ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು ನಮ್ಮಲ್ಲಿ ಎಸ್ ಪಿ ಅವರಿಂದ ದೊರೆತ ಆದೇಶ ಪ್ರತಿಯಿದೆ. ಕಾಮಗಾರಿ ಕೈಗೊಳ್ಳಲು ಅನುಮೋದನೆ ದೊರೆತಿದೆ ಎಂದು ಪ್ರತಿಭಟನಾಕಾರರಿಗೆ ತಿಳಿಸಿದರು. ಕೂಡಲೇ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಈ ಬಗ್ಗೆ ಜನರಿಗೆ ನ್ಯಾಯ ದೊರಕಿಸಿಕೊಡುವಂತೆ ವಿನಂತಿಸಲಾಯಿತು.
ಶಾಸಕರು ಬೆಂಗಳೂರು ಪ್ರವಾಸದಲ್ಲಿದ್ದು, ಐದು ದಿನಗಳ ಬಳಿಕ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸುವುದಾಗಿ ಅಲ್ಲದೆ ಅಲ್ಲಿಯವರೆಗೂ ಕಾಮಗಾರಿಗೆ ತಡೆನೀಡಲು ಆದೇಶಿಸಿದರು.
ಈ ಸಂದರ್ಭ ಪಂಚಾಯತ್ ಸದಸ್ಯರಾದ ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಮನೋಜ್ ವಳವೂರು, ಸತೀಶ್ ಮಾಡಂಗೆ, ಮಾಧವ ವಳವೂರು, ಬ್ರಹ್ಮರಕೂಟ್ಲು ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರು ಸೇರಿದಂತೆ ಗ್ರಾಮಸ್ಥರು ಜಮಾಯಿಸಿದ್ದರು.