ಬೆಳ್ತಂಗಡಿ: ಪಟ್ಟಣ ಪಂಚಾಯತ್ ವ್ಯವಸ್ಥೆಯ ಜನಜಂಗುಳಿ ಪ್ರದೇಶವಾಗಿರುವ ಸಂತೆ ಮಾರುಕಟ್ಟೆ ಪ್ರದೇಶದ ಚರಂಡಿಗಳು ಗಬ್ಬುನಾಥ ಬೀರುತ್ತಿದೆ.
ದಿನನಿತ್ಯ ಸಾವಿರಾರು ಜನರು ಭೇಟಿ ನೀಡುವ ಮೂಲಕ ಜನಜಂಗುಳಿ ಪ್ರದೇಶವಾಗಿರುವ ಬೆಳ್ತಂಗಡಿ ಸಂತೆ ಮಾರುಕಟ್ಟೆ ಪ್ರದೇಶದ ಚರಂಡಿಗಳ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು , ದುರ್ವಾಸನೆಯಿಂದ ಕೂಡಿದೆ.
ಹಸಿ, ಒಣಮೀನು ಜೊತೆಗೆ ಮಾಂಸದಂಗಡಿಗಳ ನಡುವೆ ಸಾರ್ವಜನಿಕ ಶೌಚಾಲಯವಿದ್ದು, ಚರಂಡಿಗಳಲ್ಲಿ ತ್ಯಾಜ್ಯ ತುಂಬಿ ತುಳುಕುತ್ತಿದೆ. ಮಾರುಕಟ್ಟೆಯ ತ್ಯಾಜ್ಯ ನೀರಿನ ಸರಿಯಾದ ನಿರ್ವಹಣೆ ಇಲ್ಲದೆ ರಸ್ತೆ, ಚರಂಡಿಗಳಲ್ಲಿ ಬೇಕಾಬಿಟ್ಟಿಯಾಗಿ ಹರಿಯುತ್ತಿದೆ.
ತಿಂಗಳಿಗೆ ಸಾವಿರಾರು ರೂಪಾಯಿ ಬಾಡಿಗೆ ನೀಡಿದರೂ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ , ದುರ್ವಾಸನೆಯಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದ ಜನರು ಬರಲು ಹೆದರುತ್ತಿದ್ದು, ವ್ಯಾಪಾರ ಕುಸಿತಗೊಂಡಿದೆ ಎಂದು ವ್ಯಾಪಾರಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೀನು, ಮಾಂಸದಂಗಡಿಗಳ ಮಲಿನ ನೀರು ಓಪನ್ ಸಾರ್ವಜನಿಕ ಚರಂಡಿಗಳಲ್ಲಿ ಹರಿಯುತ್ತಿದ್ದು, ಹಗಲು ರಾತ್ರಿ ಎನ್ನದೆ ಸೊಳ್ಳೆ ಕಡಿತದಿಂದ ವ್ಯಾಪಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಪ್ರತಿನಿತ್ಯ ವ್ಯಾಪಾರಕ್ಕೆ ತೆರಳುವ ಜನಪ್ರತಿನಿಧಿಗಳಿಗೆ, ಪ್ರತಿ ತಿಂಗಳು ಬಾಡಿಗೆ ವಸೂಲಿಗೆ ತೆರಳುವ ಪಟ್ಟಣ ಪಂಚಾಯತ್ ಸಿಬ್ಬಂದಿಗಳಿಗೆ ಈ ವಿಚಾರ ತಿಳಿಯದಿರುವುದು ದುರಂತ. ಇಲ್ಲಿ ಉಚಿತ ದುರ್ವಾಸನೆಯ ಪರಿಮಳ, ಉಚಿತ ಸೊಳ್ಳೆ ಕಡಿತ, ಉಚಿತ ಕಾಯಿಲೆಗಳ ಕೇಂದ್ರವಾಗಿ ಪರಿಣಮಿಸಿದೆ ಎಂದು ವ್ಯಾಪಾರಿ, ಸಾರ್ವಜನಿಕರು ತಮ್ಮ ವ್ಯಂಗ್ಯಭರಿತ ಹೇಳಿಕೆಗಳ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.