ಮಂಗಳೂರು: ‘ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತ ಪಠ್ಯವನ್ನು ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಸಮಾಜ ವಿಜ್ಞಾನ ಪಾಠ ಪುಸ್ತಕದಿಂದ ಕೈಬಿಟ್ಟಿದ್ದು ಮತ್ತೆ ಸೇರ್ಪಡೆ ಮಾಡದಿದ್ದರೆ ಉಗ್ರ ಹೋರಾಟ ಅನಿವಾರ್ಯ’ ಎಂದು ಅಖಿಲ ಭಾರತ ಬಿಲ್ಲವ ಯೂನಿಯನ್ ಅಧ್ಯಕ್ಷ ನವೀನ ಚಂದ್ರ ಡಿ.ಸುವರ್ಣ ತಿಳಿಸಿದರು.
ನಾರಾಯಣ ಗುರು ಯುವ ವೇದಿಕೆ ವತಿಯಿಂದ ಏರ್ಪಡಿಸಿದ್ದ ‘ಬ್ರಹ್ಮಶ್ರೀ ’ ಬಂಗಾರದ ಪದಕ ಪ್ರದಾನ, ವಿದ್ಯಾರ್ಥಿವೇತನ ವಿತರಣೆ ಮತ್ತು ಸಾಧನಶೀಲರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ನಾರಾಯಣ ಗುರುಗಳ ಪಠ್ಯ ಕೈಬಿಟ್ಟ ಬಗ್ಗೆ ಜನಪ್ರತಿನಿಧಿಗಳು ಬಹಿರಂಗ ಹೇಳಿಕೆ ಮೂಲಕ ವಿರೋಧಿಸಬೇಕು. ಎಲ್ಲವನ್ನೂ ಸಹಿಸಿಕೊಂಡು ಮತ ಚಲಾಯಿಸುವ ಕಾಲದೂರವಾಗಿದೆ. ಸಮಾಜದ ಹಿತ ಕಾಯುವವರನ್ನೇ ಜನಪ್ರತಿನಿಧಿಗಳನ್ನಾಗಿ ಆರಿಸಬೇಕಾಗಿದೆ’ ಎಂದು ತಿಳಿಸಿದರು.
‘ಬಿಲ್ಲವರಿಗೆ ಮೇಲ್ವರ್ಗದವರು ದೌರ್ಜನ್ಯ ಮಾಡಿದ ಅಂಶ ನಾರಾಯಣ ಗುರುಗಳ ಸಂದೇಶ ಪಾಠದಲ್ಲಿತ್ತು. ಆದರೆ, ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಈ ಪಠ್ಯ ವನ್ನು ಕೈಬಿಟ್ಟಿದೆ. ಆ ಸಮಿತಿಯ ಸದಸ್ಯರಲ್ಲಿ 8 ಮಂದಿ ಮೇಲ್ವರ್ಗದವರೇ ಇದ್ದರು. ಅಂತಹ ಸಮಿತಿ ಹಿಂದುಳಿದ ವರ್ಗದವರ ಬಗ್ಗೆ
ಎಂತಹ ಭಾವನೆ ಹೊಂದಿರಬಹುದು ಎಂಬುದು ತಿಳಿಯದ ವಿಚಾರವೇನಲ್ಲ. ಈಗಾಗಲೇ ತಾಲ್ಲೂಕು ಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳುತ್ತಿದ್ದೇವೆ. ಮಂಗಳೂರಿನಲ್ಲಿ ದೊಟ್ಟ ಮಟ್ಟದಲ್ಲಿ ಪ್ರ ತಿಭಟನೆ ನಡೆಸಲಿದ್ದೇವೆ. ಎಲ್ಲ ಹಿಂದುಳಿದ ವರ್ಗದವರೂ ಈ ಹೋರಾಟಕ್ಕೆ ಕೈಜೋಡಿಸಬೇಕು’ ಎಂದು ಕೋರಿದರು.