ಹಾಸನ: ವಿವಾಹ ವಿಚ್ಛೇದನ ಪ್ರಕರಣದ ಹಿನ್ನಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿಯೇ ಪತಿ ತನ್ನ ಪತ್ನಿಯ ಕತ್ತು ಕೊಯ್ದು ಹತ್ಯೆ ಮಾಡಿರುವ ಪ್ರಕರಣ ಹೊಳೆನರಸೀಪುರದಲ್ಲಿ ನಡೆದಿದೆ.
ಹೊಳೆನರಸೀಪುರ ಸಮೀಪದ ತಟ್ಟೆಕೆರೆ ಗ್ರಾಮದ ಶಿವಕುಮಾರ್ ಮತ್ತು ಚೈತ್ರಾ (33) ದಂಪತಿಯ ವಿಚ್ಛೇದನದ ಪ್ರಕರಣ ಹೊಳೆನರಸೀಪುರದ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಶನಿವಾರ ವಿಚಾರಣೆ ಇದ್ದುದರಿಂದ ಚೈತ್ರಾ ತನ್ನ ಎರಡು ಹೆಣ್ಣು ಮಕ್ಕಳೊಂದಿಗೆ ನ್ಯಾಯಾಲಯಕ್ಕೆ ಬಂದಿದ್ದರು. ಶಿವಕುಮಾರನೂ ಬಂದಿದ್ದ.
ನ್ಯಾಯಾಲಯದ ವಿಚಾರಣೆ ಆರಂಭಕ್ಕೆ ಮುನ್ನವೇ ಚೈತ್ರಾ ಬಳಿ ಹೋದ ಶಿವಕುಮಾರ ಆಕೆಯನ್ನು ಎಳೆದುಕೊಂಡು ಚಾಕುವಿನಿಂದ ಕತ್ತು ಕೊಯ್ದಿದ್ದಾನೆ. ತಾಯಿಯ ಬಳಿ ಇದ್ದ ಮಕ್ಕಳು ಚೀರಾಡಿದಾಗ ಸಾರ್ವಜನಿಕರು ರಕ್ಷಣೆಗೆ ಬಂದಾಗ ಸಾರ್ವಜನಿಕರಿಗೂ ಚಾಕು ತೋರಿಸಿ ತಪ್ಪಿಸಿಕೊಳ್ಳಲು ಶಿವಕುಮಾರ ಯತ್ನಿಸಿದ್ದಾನೆ. ಆದರೂ ಜನರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಚೈತ್ರಾಗೆ ಹೊಳೆನರಸೀಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹಾಸನದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆ ತಂದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟರು.