ಮಡಿಕೇರಿ: ಸುಬ್ರಹ್ಮಣ್ಯ ಷಷ್ಠಿ ಹಾಗೂ ದೇವಾಲಯ ವಾರ್ಷಿಕೋತ್ಸವದಲ್ಲಿ ಅನ್ಯಕೋಮಿನವರು ವ್ಯಾಪಾರ ವಹಿವಾಟು ನಡೆಸಬಾರದು ಎಂದು ಹಿಂದೂ ಸಂಘಟನೆ ಹಾಗೂ ಭಜರಂಗದಳದವರು ಎಚ್ಚರಿಕೆ ನೀಡಿದ್ದಾರೆ. ಆದರೆ ಹಿಂದೂಗಳ ಆಧಾರ್ ಕಾರ್ಡ್ಗಳನ್ನು ಬಳಸಿಕೊಂಡು ಅನ್ಯಕೋಮಿನ ಯುವಕರು ವ್ಯಾಪಾರ ವಹಿವಾಟು ನಡೆಸುತ್ತಿದ್ದುದು ಬೆಳಕಿಗೆ ಬಂದಿದೆ.
ಇಂದು ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹರಿಹರ ಗ್ರಾಮದ ಹರಿಹರ ದೇವಾಲಯದಲ್ಲಿ ಸುಬ್ರಹ್ಮಣ್ಯ ಷಷ್ಠಿ ಹಾಗೂ ದೇವಾಲಯದ ವಾರ್ಷಿಕೋತ್ಸವ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ 4 ದಿನಗಳ ಹಿಂದೆಯೇ ಹಿಂದೂಯೇತರರು ವ್ಯಾಪಾರ ವಹಿವಾಟು ನಡೆಸಬಾರದು ಎಂಬ ಎಚ್ಚರಿಕೆ ನೀಡಲಾಗಿತ್ತು. ಒಂದು ವೇಳೆ ವ್ಯಾಪಾರ ನಡೆಸಲು ಬಂದರೆ ಅದರ ಪರಿಣಾಮ ಬೇರೆ ರೀತಿಯಲ್ಲಿ ಎದುರಿಸಬೇಕಾಗುತ್ತದೆ ಎಂದು ಖಡಕ್ ಆಗಿ ಹಿಂದೂ ಸಂಘಟನೆ ಪ್ರಮುಖರು ಎಚ್ಚರಿಕೆ ನೀಡಿದ್ದರು.
ಈ ಎಚ್ಚರಿಕೆಗಳ ನಡುವೆಯೂ ಇಂದು ಹರಿಹರ ದೇವಾಲಯದ ಸುಬ್ರಹ್ಮಣ್ಯ ಷಷ್ಠಿ ಇರುವ ಹಿನ್ನೆಲೆಯಲ್ಲಿ ಅನ್ಯಕೋಮಿನ ಕೆಲ ಯುವಕರು ಹಿಂದೂಗಳ ನಕಲಿ ಐಡಿ ಕಾರ್ಡ್ ಬಳಸಿಕೊಂಡು ವ್ಯಾಪಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ದೇವಾಲಯದ ಹೊರಭಾಗದಲ್ಲಿ ವ್ಯಾಪಾರ ನಡೆಸುತ್ತಿರುವುದನ್ನು ಕಂಡ ಸಂಘಟನಾಕಾರರು ವ್ಯಾಪಾರಸ್ಥರ ಐಡಿ ಕಾರ್ಡ್ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.
ಅನ್ಯಕೋಮಿನ ಯುವಕರು ಹಿಂದೂಗಳ ಐಡಿ ಕಾರ್ಡ್ ಬಳಸಿಕೊಂಡು ವ್ಯಾಪಾರ ನಡೆಸುತ್ತಿರುವುದು ಬೆಳಕಿಗೆ ಬಂದ ತಕ್ಷಣವೇ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ದುರ್ಗ ವಾಹಿನಿಯ ಜಿಲ್ಲಾ ಸಂಚಾಲಕಿ ಅಂಬಿಕಾ ಅವರು ಸ್ಥಳಕ್ಕೆ ತೆರಳಿ ಅನ್ಯಕೋಮಿನ ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಅವರ ವ್ಯಾಪಾರದ ಸಾಮಗ್ರಿಗಳನ್ನು ತೆರವು ಮಾಡಿ ಅಲ್ಲಿಂದ ಕಳುಹಿಸಲಾಗಿದೆ.