ಬೆಂಗಳೂರು : ‘ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸುವ ಮೊದಲು ನಡೆದ ಮುಖ್ಯ ಪರೀಕ್ಷೆಗಳನ್ನ ತಪ್ಪಿಸಿಕೊಂಡರೆ ಮಾತ್ರ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗಳಿಗೆ ಅವಕಾಶ ನೀಡಬಹುದು. ಯಾಕೆಂದರೆ, ಪರೀಕ್ಷೆ ತಪ್ಪಿಸಿಕೊಂಡಿರುವುದನ್ನು ಮುಗ್ಧತೆ ಅಥವಾ ಅಜ್ಞಾನ ಎಂದು ಪರಿಗಣಿಸಬಹುದು’ ಎಂದು ಮಾಧುಸ್ವಾಮಿ ಹೇಳಿದರು.
‘ಆದರೆ, ಮಧ್ಯಂತರ ಆದೇಶ ಹೊರಬಂದ ನಂತರವೂ ಪರೀಕ್ಷೆಗಳನ್ನ ತಪ್ಪಿಸಿಕೊಂಡ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗೆ ಅನುಮತಿಸಲಾಗುವುದಿಲ್ಲ. ಅವರು ನ್ಯಾಯಾಲಯದ ಆದೇಶವನ್ನ ಧಿಕ್ಕರಿಸಿದರು’ ಎಂದು ಮಾಧುಸ್ವಾಮಿ ಹೇಳಿದರು.
ಪರೀಕ್ಷೆ ತಪ್ಪಿಸಿಕೊಂಡ ಮತ್ತು ಹಿಜಾಬ್ ಇಲ್ಲದೇ ಬರೆಯಲು ಸಿದ್ಧವಾಗಿರುವ ಹುಡುಗಿಯರಿಗೆ ರಾಜ್ಯ ಸರ್ಕಾರ ಮತ್ತೊಂದು ಅವಕಾಶ ನೀಡಬೇಕು ಎಂಬ ಉಡುಪಿ ಶಾಸಕ ರಘುಪತಿ ಭಟ್ ಮನವಿಗೆ ಮಾಧುಸ್ವಾಮಿ ಶೂನ್ಯ ವೇಳೆಯಲ್ಲಿ ಪ್ರತಿಕ್ರಿಯಿಸುತ್ತಿದರು.
‘ನ್ಯಾಯಾಲಯದ ಆದೇಶವನ್ನು ಯಾವ ನಾಗರಿಕನೂ ಧಿಕ್ಕರಿಸಲು ಸಾಧ್ಯವಿಲ್ಲ. ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದು ಅವರ ನಾಗರಿಕ ಹಕ್ಕು’ ಎಂದು ಮಾಧುಸ್ವಾಮಿ ಹೇಳಿದರು. ‘ಸರ್ವೋಚ್ಚ ನ್ಯಾಯಾಲಯವು ನಿರ್ಧಾರ ತೆಗೆದುಕೊಳ್ಳುವವರೆಗೆ ಹೈಕೋರ್ಟ್ ಆದೇಶವನ್ನ ಜಾರಿಗೆ ತರಲು ರಾಜ್ಯ ಸರ್ಕಾರ ಬದ್ಧವಾಗಿದೆ’ ಎಂದರು.