Monday, August 31, 2026
spot_imgspot_img
spot_imgspot_img

ಪಂಪ್ ಸೆಟ್ ಕದಿಯಲು ಹೋದವರು ಹೆಣವಾದರು

- Advertisement -
- Advertisement -

ತುಮಕೂರು: ರೈತರ ತೋಟದಲ್ಲಿ ಮೋಟಾರ್ ಪಂಪ್​ಸೆಟ್ ಕದಿಯಲು ಬಂದು ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಯುವಕರಿಬ್ಬರನ್ನು ಹಿಗ್ಗಾಮುಗ್ಗಾ ಥಳಿಸಿ ಕೊಲೆ ಮಾಡಲಾಗಿದೆ.

ಇಂತಹ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಡಬ ಹೋಬಳಿಯ ಪೆದ್ದನಹಳ್ಳಿಯಲ್ಲಿ ಸಂಭವಿಸಿದೆ. ಪೆದ್ದನಹಳ್ಳಿ ಗ್ರಾಮದ ಅನಿಲ್ (32) ಮತ್ತು ಮಂಚಲದೋರೆ ಗ್ರಾಮದ ಅನಿಲ್(33) ಕೊಲೆಯಾದ ಯುವಕರು.

ಆಟೋ ಚಾಲಕನಾಗಿದ್ದ ಅನಿಲ್, ಪೆದ್ದನಹಳ್ಳಿ ಸುತ್ತಮುತ್ತ ಆಟೋ ಓಡಿಸಿಕೊಂಡಿದ್ದ. ಮೂರು ತಿಂಗಳ ಹಿಂದೆ ಅನಿಲ್ ವಿರುದ್ಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಮೇಲೆ ಬೈಕ್ ಕಳ್ಳತನದ ಕೇಸ್ ದಾಖಲಾಗಿತ್ತು. ಮೂರು ತಿಂಗಳು ಜೈಲುಶಿಕ್ಷೆ ಅನುಭವಿಸಿ ಹೊರಬಂದಿದ್ದ ಅನಿಲ್​, ಗುರುವಾರ ಸಂಜೆ ಮಂಚಲದೊರೆ ಗ್ರಾಮದ ಅನಿಲ್ ಎಂಬಾತನನ್ನು ಪೆದ್ದನಹಳ್ಳಿಗೆ ಕರೆಸಿಕೊಂಡಿದ್ದ. ಇಬ್ಬರೂ ಮನೆಯಲ್ಲಿ ಒಟ್ಟಿಗೆ ಊಟ ಮಾಡಿ ರಾತ್ರಿ 11 ಗಂಟೆ ಸುಮಾರಿಗೆ ಪೆದ್ದನಹಳ್ಳಿ ಗ್ರಾಮದ ತೋಟದಲ್ಲಿ ಮೋಟರ್ ಪಂಪ್​ಸೆಟ್ ಕದಿಯಲು ಹೋಗಿದ್ದರು.

ಈ ವೇಳೆ ಯುವಕರಿಬ್ಬರೂ ತೋಟದ ಮಾಲೀಕನ ಕೈಗೆ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದಿದ್ದು, ಮಾಲೀಕನ ಕಡೆಯವರು ತಡ ರಾತ್ರಿಯವರೆಗೂ ಯುವಕರ ಬಟ್ಟೆಬಿಚ್ಚಿ ಅಮಾನುಷವಾಗಿ ಥಳಿಸಿ ಕೊಲೆ ಮಾಡಿದ್ದಾರೆ. ಮೃತದೇಹಗಳನ್ನು ತೋಟದಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿ ಅಂದರೆ ಒಬ್ಬನ ಶವ ಪೆದ್ದನಹಳ್ಳಿಯ ನೀರಿನ ಕಟ್ಟೆ ಬಳಿ, ಮತ್ತೊಬ್ಬನ ಶವ ನೀರಿನ ಕಟ್ಟೆಯ ರಸ್ತೆಬದಿ ಬಿಸಾಡಿ ಪರಾರಿಯಾಗಿದ್ದಾರೆ.

ಶುಕ್ರವಾರ ಬೆಳ್ಳಂಬೆಳಗ್ಗೆ ಗ್ರಾಮಸ್ಥರು ಯುವಕರ ಶವಗಳನ್ನ ಕಂಡು ಬೆಚ್ಚಿಬಿದ್ದಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಎಸ್​ಪಿ ರಾಹುಲ್ ಕುಮಾರ್ ಪರಿಶೀಲನೆ ನಡೆಸಿದರು. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

- Advertisement -

Related news

error: Content is protected !!